ಮೈಸೂರು : 'ಮೈಸೂರು ಸಂಸ್ಥಾನ'ದ ಉತ್ತರಾಧಿಕಾರಿ ಯದುವೀರ ಅರಸ್ ದತ್ತು ಸ್ವೀಕಾರ ಸಮಾರಂಭ ಮುಕ್ತಾಯಗೊಂಡಿದ್ದು, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಪ್ರಮೋದಾ ದೇವಿ ಅವರ ದತ್ತು ಪುತ್ರನಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಮರು ನಾಮಕರಣ ಮಾಡಲಾಗಿದೆ.
ದತ್ತು ಸ್ವೀಕಾರ ಸಮಾರಂಭ ಮುಕ್ತಾಯಗೊಂಡ ಬೆನ್ನಲ್ಲೇ ಮೈಸೂರು ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಗುರುಗಳಾದ ಪರಕಾಲ ಶ್ರೀಗಳ ಪಾದಪೂಜೆ ನಡೆಸಿದ್ದಾರೆ.
ಅರಮನೆ ಧರ್ಮಾಧಿಕಾರಿಗಳಾದ ಜನಾರ್ದನ ಅಯ್ಯಂಗಾರ್ ನೇತೃತ್ವದಲ್ಲಿ ಮುಂಜಾನೆಯಿಂದಲೇ ದತ್ತು ಸ್ವೀಕಾರ ಸಮಾರಂಭ ಪ್ರಾರಂಭವಾಗಿತ್ತು. ಪರಕಾಲ ಶ್ರೀಗಳು ಅಂಬಾವಿಲಾಸ ಅರಮನೆಗೆ ಅಗಮಿಸಿದ ನಂತರ ಅವರ ಮಾರ್ಗದರ್ಶನದಲ್ಲಿ ದತ್ತು ಸ್ವೀಕಾರ ಕಾರ್ಯಕ್ರಮದ ಪ್ರಕ್ರಿಯೆ ಸಂಪೂರ್ಣವಾಗಿದೆ.
ಉತ್ತರಾಧಿಕಾರಿ ಸ್ವೀಕಾರ ಸಮಾರಂಭದ ಅಂಗವಾಗಿ ಸಂಜೆ ಅರಮನೆಯ ಬಲರಾಮ ದ್ವಾರದಿಂದ ಚಾಮರಾಜ ವೃತ್ತದ ವರೆಗೂ ಬೆಳ್ಳಿ ರಥದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೆರವಣಿಗೆ ನಡೆಯಲಿದೆ. ಈ ವೇಳೆ ಯದುವಂಶದ ಉತ್ತರಾಧಿಕಾರಿಯನ್ನು ನೋಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ. ಅರಮನೆಯಲ್ಲಿ ನಡೆದ ದತ್ತು ಸ್ವೀಕಾರ ಸಮಾರಂಭವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡದ ಕಾರಣ ಮೆರವಣಿಗೆ ನಡೆಸಲಾಗುತ್ತಿದೆ. ಇದಕ್ಕೂ ಮುನ್ನ ಮಹಾರಾಣಿ ಪ್ರಮೋದಾದೇವಿ ಅವರೊಂದಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದೇವಾಲಯಗಳನ್ನು ಸಂದರ್ಶಿಸಲಿದ್ದಾರೆ.