ನವದೆಹಲಿ : 'ಭಯೋತ್ಪಾದನೆ' ವಿರುದ್ಧ ಹೋರಾಡುವುದಾಗಿ ಪಣತೊಟ್ಟಿರುವ ಪಾಕಿಸ್ತಾನಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಸವಾಲು ಹಾಕಿದ್ದು, "ನೀವು ನಿಜವಾಗಿಯೂ ಭಯೋತ್ಪಾದನೆ ವಿರುದ್ಧ ಹೋರಾಡುವುದೇ ಆದರೆ ಉಗ್ರ ಸಯ್ಯದ್ ಹಫೀಜ್ ಹಾಗೂ ದಾವೂದ್ ಇಬ್ರಾಹಿಂ ನನ್ನು ನಮ್ಮ ವಶಕ್ಕೆ ಒಪ್ಪಿಸಿ" ಎಂದು ಹೇಳಿದ್ದಾರೆ.
ಡಿ.18ರ ಸಂಸತ್ ಕಲಾಪದಲ್ಲಿ ಮಾತನಾಡಿದ ವೆಂಕಯ್ಯ ನಾಯ್ಡು, ಪೇಶಾವರ್ ನಲ್ಲಿ ಶಾಲಾ ಮಕ್ಕಳ ನರಮೇಧ ನಡೆದ ಬಳಿಕ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಪಣತೊಟ್ಟಿದೆ, ಪಾಕಿಸ್ತಾನ ಉಗ್ರವಾದದ ವಿರುದ್ಧ ಹೋರಾಡುವುದೇ ಆದಲ್ಲಿ ಮೊದಲು ಭಾರತಕ್ಕೆ ಬೇಕಾಗಿರುವ ಮುಂಬೈ ದಾಳಿ ರುವಾರಿ ಉಗ್ರ ಹಫೀಜ್ ಸಯ್ಯದ್ ಹಾಗೂ ಮುಂಬೈ ಸರಣಿ ಸ್ಪೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ನಮಗೆ ಹಸ್ತಾಂತರಿಸಲಿ ಎಂದು ಸವಾಲು ಹಾಕಿದ್ದಾರೆ.
ದಾವೂದ್ ಇಬ್ರಾಹಿಂ ಹಾಗೂ ಹಫೀಜ್ ಸಯ್ಯದ್ ಅತ್ಯಂತ ಅಪಾಯಕಾರಿ ಭಯೋತ್ಪಾದಕರಾಗಿದ್ದು ಅತಿ ಶೀಘ್ರವೇ ಬಂಧಿಸಿ ಶಿಕ್ಷೆ ನೀಡಬೇಕು ಎಂದು ವೆಂಕಯ್ಯ ನಾಯ್ಡು ಸಂಸತ್ ಗೆ ತಿಳಿಸಿದ್ದಾರೆ.
ಪಾಕಿಸ್ತಾನ ತಾನು ಭಯೋತ್ಪಾದನೆ ವಿರುದ್ಧ ಹೋರಾಡುತ್ತದೆ ಎಂಬುದನ್ನು ಈ ಇಬ್ಬರು ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವ ಮೂಲಕ ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ. ಅಲ್ಲದೇ ಪಾಕಿಸ್ತಾನ ಉಗ್ರರನ್ನು ಉತ್ತೇಜಿಸುವ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು ಎಂದಿದ್ದಾರೆ.
ಪೇಶಾವರದ ಮಿಲಿಟರಿ ಶಾಲೆ ಮೇಲೆ ತಾಲೀಬಾನ್ ಉಗ್ರರು ನಡೆಸಿದ ದಾಳಿಯಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಉಗ್ರರ ಈ ಪೈಶಾಚಿಕ ಕೃತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಕರೆದಿದ್ದ ಪಾಕ್ ಪ್ರಧಾನಿ ನವಾಜ್ ಷರೀಫ್ ತಮ್ಮ ಸರ್ಕಾರ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಘೋಷಿಸಿದ್ದರು.
ಪಾಕ್ ಪ್ರಧಾನಿ ಹೇಳಿಕೆಗೆ ವೆಂಕಯ್ಯ ನಾಯ್ಡು ಪ್ರತಿಕ್ರಿಯಿಸಿ ಮೊದಲು ಭಾರತಕ್ಕೆ ಬೇಕಿರುವ ಇಬ್ಬರು ಉಗ್ರರನ್ನು ಹಸ್ತಾಂತರಿಸಲಿ ಎಂದಿದ್ದಾರೆ.