ಬೆಳಗಾವಿ : ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹೈಕಮಾಂಡ್ ರಕ್ಷಣೆ ಇದೆ. ಹಾಗಾಗಿರಾಜ್ಯ ಸರ್ಕಾರಕ್ಕೆ ಕಬ್ಬು ಬೆಳೆಗಾರರಿಗೆ ಬಾಕಿ ಹಣವನ್ನು ಕೊಡಿಸಲು ಸಾಧ್ಯವಾಗಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪೂರ್ವಾಪರ ಯೋಚಿಸಿ ಕಬ್ಬಿನ ದರ ನಿಗದಿ ಮಾಡಬೇಕಿತ್ತು. ಇದರಲ್ಲಿ ರಾಜ್ಯ ಸರ್ಕಾರದ್ದೇ ನೇರ ಹೊಣೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಯೂ ಇದೆ ಎಂದರು.
ಕಬ್ಬು ಬೆಳೆಗಾರರ ಸಮಸ್ಯೆ ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಇದೆ. ಕೆಲವರು ರೈತರನ್ನು ಗುತ್ತಿಗೆ ಪಡೆದವರಂತೆ ರೈತರ ಪರವಾಗಿ ಮಾತನಾಡುತ್ತಾರೆ. ಬಿದಾಯ್ ಯೋಜನೆಗೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧರಣಿ ಕುಳಿತಿದ್ದರು. ಅಷ್ಟರಲ್ಲೇ ರೈತ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ನಂತರ ರೈತರ ಪರ ಧರಣಿ ಪ್ರಾರಂಭಿಸಿದ್ದರು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಕೇಂದ್ರ ಸರ್ಕಾರ ಕಬ್ಬಿಗೆ ಎಫ್ಆರ್ಪಿ 2,100 ರೂ. ನಿಗದಿ ಮಾಡಿದೆ. ರಾಜ್ಯಸರ್ಕಾರ 2,500 ರೂ. ಕೊಡುವುದಾಗಿ ಹೇಳಿದೆ. ನಾನು ಮೇ ತಿಂಗಳಲ್ಲೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ರೈತರ ಜೊತೆ ಚೆಲ್ಲಾಟ ಬೇಡ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ್ದೆ ಎಂದು ಹೇಳಿದರು. ಈ ವೇಳೆ ಎಚ್.ಡಿ.ರೇವಣ್ಣ ಮಾತನಾಡಿ, ಬಿಜೆಪಿಯ 17 ಮಂದಿ ಸಂಸತ್ ಸದಸ್ಯರಿದ್ದಾರೆ. ಲೋಕಸಭೆ ಅಧಿವೇಶನದಲ್ಲಿ ರಾಜ್ಯಸರ್ಕಾರದ ಪರ ವಾದ ಮಾಡಿ ಕಬ್ಬು ಬೆಳೆಗಾರರಿಗೆ ನ್ಯಾಯ ಕೊಡಿಸಬಹುದಲ್ಲ ಎಂದರು.