ನವದೆಹಲಿ : ನಿಷೇಧಿತ 'ಸಿಮಿ ಉಗ್ರ ಸಂಘಟನೆ'ಯ 5 ಉಗ್ರರು ಮಧ್ಯಪ್ರದೇಶದ ಜೈಲಿನಿಂದ ಪರಾರಿಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.
ಜೈಲಿನಿಂದ ತಪ್ಪಿಸಿಕೊಂಡಿರುವ ಉಗ್ರರಿಗೆ ಭಾರತದಾದ್ಯಂತ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನದ ಐ.ಎಸ್.ಐ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಗುಪ್ತಚರ ಇಲಾಖೆ ಮಾಹಿತಿ ಅನ್ವಯ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.
ಮೊಹಮ್ಮದ್ ಐಜಾಜುದ್ದೀನ್, ಮೊಹಮ್ಮದ್ ಅಸ್ಲಾಮ್, ಅಜ್ಮದ್ ಖಾನ್, ಜಾಕಿರ್ ಹುಸೇನ್ ಸಾದಿಕ್ ಹಾಗೂ ಮೆಹಬೂಬ್ ಗುಡ್ಡು ಎಂಬ 5 ಜನರನ್ನೊಳಗೊಂಡ ಉಗ್ರರ ತಂಡ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕಿ ನೀಡಿದೆ.
ಪ್ರಮುಖವಾಗಿ ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ರಾಜ್ಯಗಳು ಅತಿ ಹೆಚ್ಚು ಜಾಗರೂಕತೆ ವಹಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ. ಇದೇ ತಂಡ ಇತ್ತೀಚೆಗಷ್ಟೇ ತೆಲಂಗಾಣ ರಾಜ್ಯದಲ್ಲಿ ನಡೆದ ಬ್ಯಾಂಕ್ ಕಳ್ಳತನ ಪ್ರಕರಣ, ಚೆನ್ನೈ ನಲ್ಲಿ ನಡೆದ ಬೆಂಗಳೂರು ಗುವಾಹಟಿ ರೈಲು ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಶಂಕಿಸಲಾಗಿದೆ.