ಇಸ್ಲಾಮಾಬಾದ್ : ಜಮ್ಮು-ಕಾಶ್ಮೀರದ ವಿವಿಧೆಡೆ ದಾಳಿ ನಡೆಸಿ, 11 ಯೋಧರು ಸೇರಿ 21 ಮಂದಿಯನ್ನು ಉಗ್ರರು ಬಲಿಪಡೆದಿರುವ ಬೆನ್ನಲ್ಲೇ, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಧರ್ಮ ಯುದ್ಧವನ್ನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಮೂಲಕ ಭಾರತದ ಗಾಯಯಕ್ಕೆ ಉಪ್ಪು ಸವರಿದ್ದಾನೆ.
ಕಣಿವೆ ರಾಜ್ಯದಲ್ಲಿ ಸರಣಿ ಆತ್ಮಾಹುತಿ ದಾಳಿ ಬಳಿಕ ಟ್ವೀಟ್ ಮಾಡಿರುವ ಪಾತಕಿ ಸಯೀದ್, ಧರ್ಮಯುದ್ಧವನ್ನು ತಡೆಯಲಾಗದು. ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಕ್ಕೇ ಸಿಗುತ್ತದೆ. 1971 ರ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗುಡುಗಿದ್ದಾನೆ.
ಗುಜರಾತ್ ಗಲಭೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುತ್ತೇವೆ. ಇನ್ಷಾ ಅಲ್ಲಾಹ್ ಎಂದಿದ್ದಾನೆ. ಈ ಮೂಲಕ ದಾಳಿಯಲ್ಲಿ ಪಾಕ್ ಕೈವಾಡ ಇರುವುದನ್ನು ಸ್ಪಷ್ಟಪಡಿಸಿದ್ದಾನೆ.
ಭಾರತದಿಂದ ಮುಕ್ತಿ ಪಡೆಯಲು ಕಾಶ್ಮೀರಿಗಳಿಗೆ ಪಾಕ್ ಸರ್ಕಾರ ನೆರವಾಗಬೇಕು ಎಂದು ಹೇಳಿರುವ ಸಯೀದ್. ಭಾರತವು ಆಫ್ಘನ್ ಗೆ ಸೇನೆ ಕಳುಹಿಸಬಹುದು ಎಂದರೆ ಮುಜಾಹಿದೀನ್ಗಳಿಗೂ ಕಾಶ್ಮೀರಕ್ಕೆ ತೆರಳುವ ಅಧಿಕಾರ ಇದೆ. ಕಾಶ್ಮೀರ ವಿವಾದವನ್ನು ಪರಿಹರಿಸದೇ ಇದ್ದಲ್ಲಿ ಇಂತಹ ಜಿಹಾದ್ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ.