ಶ್ರೀನಗರ : ಶಾಂತ ರೀತಿಯಿಂದ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಳಿ ತಪ್ಪಿಸಲು ವ್ಯವಸ್ಥಿತ ರೀತಿಯಲ್ಲಿ ಅಖಾಡಕ್ಕೆ ಇಳಿದಿರುವ ಉಗ್ರರು, ಜಮ್ಮು- ಕಾಶ್ಮೀರದ ವಿವಿಧೆಡೆ ಶುಕ್ರವಾರ ಒಂದೇ ದಿನ ನಾಲ್ಕು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 11 ಭದ್ರತಾ ಸಿಬ್ಬಂದಿ, ಇಬ್ಬರು ನಾಗರಿಕರು ಸೇರಿ 21 ಮಂದಿ ಹತ್ಯೆಯಾಗಿದ್ದಾರೆ.
ಮೃತರಲ್ಲಿ ಎಂಟು ಮಂದಿ ಭಯೋತ್ಪಾದಕರೂ ಸೇರಿದ್ದಾರೆ. ಮತದಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಮತ್ತಷ್ಟು ದಾಳಿಗಳನ್ನು ನಡೆಸಬಹುದು ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಾದ್ಯಂತ ತಪಾಸಣೆ ತೀವ್ರಗೊಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ನಡೆಸುವ ಎರಡು ದಿನ ಮೊದಲು ಈ ದಾಳಿಗಳು ನಡೆದಿರುವುದು ಗಮನಾರ್ಹ. ಉಗ್ರರ ಉಪಟಳದ ನಡುವೆಯೂ ತಮ್ಮ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೋದಿ ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಉಗ್ರರ ದಾಳಿ ತಡೆಯಲು ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಆ ದೇಶಕ್ಕೆ ಸಮಸ್ಯೆ ಇದೆ ಎಂದಾದಲ್ಲಿ ಭಾರತಕ್ಕೆ ಹೇಳಲಿ. ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದು ಗೃಹ ಸಚಿವ ರಾಜನಾಥ ಸಿಂಗ್ ಖಡಕ್ ಮಾತುಗಳನ್ನು ಆಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಇದೆಲ್ಲಾ ಆಗುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ ಪರ್ರಿಕರ್ ಕಿಡಿಕಾರಿದ್ದಾರೆ.
ಜಮ್ಮು-ಕಾಶ್ಮೀರ ವಿಧಾನಸಭೆಗೆ ಡಿ.9ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಈ ನಿಮಿತ್ತ ಸೋಮವಾರ ಪ್ರಧಾನಿ ಮೋದಿ ಅವರು ಶ್ರೀನಗರದಿಂದ 100 ಕಿ.ಮೀ. ದೂರದಲ್ಲಿರುವ ಉರಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಅಗತ್ಯ ಭದ್ರತಾ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳುತ್ತಿರುವಾಗಲೇ, ಶುಕ್ರವಾರ ನಸುಕಿನ ಜಾವ 3.10ಕ್ಕೆ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ತಾಲೂಕಿನ ಮೊಹ್ರಾ ಸೇನಾ ನೆಲೆಯ ಮೇಲೆ ಆರು ಮಂದಿ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಲೆಫ್ಟಿನಂಟ್ ಕರ್ನಲ್ವೊಬ್ಬರು ಸೇರಿ 8 ಸೇನಾ ಸಿಬ್ಬಂದಿ ಹಾಗೂ ಮೂವರು ಪೊಲೀಸರು ವೀರ ಮರಣವನ್ನಪ್ಪಿದ್ದಾರೆ. ದಾಳಿಯ ವೇಳೆ ಬೆಂಕಿ ಹೊತ್ತಿಕೊಂಡಿದ್ದರಿಂದ ನಾಲ್ವರು ಸೇನಾ ಸಿಬ್ಬಂದಿ ದೇಹ ಸುಟ್ಟು ಕರಕಲಾಗಿವೆ. ದಾಳಿ ನಡೆಸಿದ ಆರು ಉಗ್ರರನ್ನೂ ಆರು ತಾಸು ಕಾರ್ಯಾಚರಣೆ ನಡೆಸಿ ಕೊಲ್ಲಲಾಗಿದೆ. ಅಪಾರ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಉರಿ ದಾಳಿ ಬೆನ್ನಲ್ಲೇ ದಕ್ಷಿಣ ಕಾಶ್ಮೀರದ ತ್ರಾಲ್ನಲ್ಲಿ ಶುಕ್ರವಾರ ಮಧ್ಯಾಹ್ನ ಜನನಿಬಿಡ ಬಸ್ ನಿಲ್ದಾಣವೊಂದಕ್ಕೆ ಉಗ್ರರು ಗ್ರೆನೇಡ್ ಎಸೆದಿದ್ದಾರೆ. ಈ ಘಟನೆಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ. ತದನಂತರ ದಕ್ಷಿಣ ಕಾಶ್ಮೀರದ ಶೋಪಿಯಾನ್ನಲ್ಲಿ ಪೊಲೀಸರತ್ತ ಗ್ರೆನೇಡ್ ಎಸೆಯಲಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಇದೆಲ್ಲದರ ನಡುವೆ, ಶ್ರೀನಗರದ ಹೊರವಲಯದ ಸೌರಾದಲ್ಲಿನ ಅಹಮದ್ನಗರದಲ್ಲಿ ಲಷ್ಕರ್ ಎ ತೊಯ್ಬಾ ಕಮಾಂಡರ್ ಹಾಗೂ ಆತನ ಸಹಚರನೊಬ್ಬನನ್ನು ಸೇನಾಪಡೆಗಳು ಕೊಂದಿವೆ. ಈ ಇಬ್ಬರೂ ಶ್ರೀನಗರ ಪ್ರವೇಶಿಸಲು ಯತ್ನಿಸುತ್ತಿದ್ದರು. ಚೆಕ್ ಪೋಸ್ಟ್ ಕಂಡುಬರುತ್ತಿದ್ದಂತೆ ವೇಗವಾಗಿ ವಾಹನ ಚಲಾಯಿಸಿದರು. ಅವರನ್ನು ಬೆನ್ನತ್ತಿ ಹೋದ ಪೊಲೀಸರು ಗುಂಡಿನ ಚಕಮಕಿ ನಡೆಸಿ ಕೊಂದಿದ್ದಾರೆ.