ಜಮ್ಮು-ಕಾಶ್ಮೀರ : ಭಾರತದೊಂದಿಗೆ ಜಮ್ಮು-ಕಾಶ್ಮೀರವನ್ನು ಒಗ್ಗೂಡಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ನ.20ರಂದು ಜಮ್ಮು-ಕಾಶ್ಮೀರದಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಒಗ್ಗೂಡಿಸಲು 2014ರ ವಿಧಾನಸಭಾ ಚುನಾವಣೆ ಮಹತ್ವವಾಗಿದೆ ಎಂದು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆಯುವ ವಿಷಯದಿಂದಲೇ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಗುರುತಿಸಿಕೊಂಡಿದೆ. 370ನೇ ವಿಧಿಯನ್ನು ರದ್ದುಗೊಳಿಸಿದರೆ ಮಾತ್ರ ಜಮ್ಮು-ಕಾಶ್ಮೀರದ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ಈ ಹಿಂದೆ ಹೇಳಿಕೆ ನೀಡಿತ್ತು.
ಭಾರತದ ಇತರ ರಾಜ್ಯಗಳಂತೆ ಜಮ್ಮು-ಕಾಶ್ಮೀರವೂ ಇರಬೇಕಾದರೆ ರಾಜ್ಯದ ಜನತೆ ನಮಗೆ ಸಹಾಯ ಮಾಡಬೇಕು ಎಂದು ಶಾ ಕರೆ ನೀಡಿದ್ದಾರೆ. ರಾಜ್ಯದ ಜನತೆಗೆ ಅಭಿವೃದ್ಧಿ, ಒಳ್ಳೆಯ ಆಡಳಿತ ಬೇಕಾದಲ್ಲಿ ಬಿಜೆಪಿಗೆ ಮತ ನೀಡಿ ಎಂದು ಶಾ ಮತದಾರರಲ್ಲಿ ಮನವಿ ಮಾಡಿದ್ದಾರೆ.
ನ.19ರಂದು ಚುನಾವಣೆ ಪ್ರಚಾರ ಕೈಗೊಂಡಿದ್ದ ರಾಜನಾಥ್ ಸಿಂಗ್, ಚುನಾವಣಾ ಸಂದರ್ಭದ್ಲಲಿ ಸಂವಿಧಾನದದ 370ನೇ ವಿಧಿ ಬಗ್ಗೆ ಚರ್ಚೆ ನಡೆಸುವುದು ಅಗತ್ಯವಿಲ್ಲ ಎಂದು ಹೇಳಿದ್ದರು.