ಮುಂಬೈ : 'ಮಹಾರಾಷ್ಟ್ರ'ದಲ್ಲಿ ಅಲ್ಪಮತದ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ನಡೆಯಲಿರುವ ಮತ್ತೊಂದು ಚುನಾವಣೆಯನ್ನು ಎದುರಿಸಲು ತಯಾರಾಗುವಂತೆ ಎನ್.ಸಿ.ಪಿ ಪಕ್ಷದ ಕಾರ್ಯಕರ್ತರಿಗೆ ಶರದ್ ಪವಾರ್ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಅಲ್ಪಮತದ ಸರ್ಕಾರ ರಚಿಸಿರುವ ಹಿನ್ನೆಲೆಯಲ್ಲಿ ಸರ್ಕಾರವನ್ನು ಬೀಳಿಸುವುದಿಲ್ಲ ಎಂದು ಈ ಹಿಂದೆ ಎನ್.ಸಿ.ಪಿ ಮುಖಂಡ ಶರದ್ ಪವಾರ್ ಹೇಳಿದ್ದರು. ಆದರೆ ನ.18ರಂದು ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಆಲಿಭಾಗ್ ನಲ್ಲಿ ನಡೆಯುತ್ತಿರುವ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪವಾರ್, 'ಮಹಾರಾಷ್ಟ್ರದಲ್ಲಿ ನಡೆಯುವ ಹಠಾತ್ ಚುನಾವಣೆಗೆ ನಾವು ಸಿದ್ಧರಿರಬೇಕು' ಎಂದು ಕರೆ ನೀಡುವ ಮೂಲಕ ಉಲ್ಟಾ ಹೊಡೆದಿದ್ದಾರೆ.
ರಾಜ್ಯದ ಚುನಾವಣೆಗಳಲ್ಲಿ ಎರಡು ಸ್ಥಾನ ಗೆದ್ದ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಂ ಐ ಎಂ) ಪಕ್ಷದ ಬೆಳವಣಿಗೆಯ ಹಿಂದೆಯೂ ಬಿಜೆಪಿ ಪಕ್ಷದ ಕೆಲವು ಶಕ್ತಿಗಳಿವೆ, ಮಹಾರಾಷ್ಟ್ರದಲ್ಲಿನ ಸರ್ಕಾರವನ್ನು ಉಳಿಸುವುದು ಎನ್.ಸಿ.ಪಿ ಪಕ್ಷದ ಕೆಲಸವಲ್ಲ. ನಾವು ಮಧ್ಯಂತರ ಚುನಾವಣೆಗೆ ಸಿದ್ಧರಾಗಬೇಕೆಂದು ಪವಾರ್ ತಿಳಿಸಿದ್ದಾರೆ. .
ಎನ್.ಸಿ.ಪಿ ಬಾಹ್ಯ ಬೆಂಬಲ ಘೋಷಿಸಿದ ನಂತರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಬಹುಮತ ಸಾಬೀತುಪಡಿಸಿದ್ದರು. ಆದರೆ ಈಗ ಶರದ್ ಪವಾರ್ ಮಧ್ಯಂತರ ಚುನಾವಣೆ ಬಗ್ಗೆ ಪ್ರಸ್ತಾಪಿಸಿರುವುದು ಕುತೂಹಲ ಮೂಡಿಸಿದೆ.