ಬೆಂಗಳೂರು : ರಾಜ್ಯದಲ್ಲಿರುವ 12 ಬಂದರುಗಳ ಪೈಕಿ 6 ಬಂದರುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜವಳಿ ಹಾಗೂ ಬಂದರು ಸಚಿವ ಬಾಬುರಾವ್ ಚಿಂಚನಸೂರ ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಭೇಟಿ ಮಾಡಿದ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕರಾವಳಿ ಭಾಗದ ಬೇಲಿಕೇರಿ, ಮಂಕಿ ಬಂದರು, ತದಡಿ, ಹೊನ್ನಾವರ, ಪಾವಿನಕೆರೆ ಹಾಗೂ ಮಲ್ಪೆ ಬಂದರುಗಳನ್ನು ಅಭಿವೃದ್ಧಿ ಪಡಿಸಲಾಗುವುದು ಬೇಲಿಕೇರಿ ಬಂದರನ್ನು ಆಶ್ರೇಯ ಕಂಪೆನಿಯು, ಮಂಕಿ ಬಂದರನ್ನು ರೇಣುಕಾ ಶುಗರ್ಸ್ ಕಂಪೆನಿಯು ಹಾಗೂ ಆಂಧ್ರ ಪ್ರದೇಶ ಮೂಲದ ಕಂಪೆನಿಯೊಂದು ಹೊನ್ನಾವರ ಬಂದರನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಮುಂದೆ ಬಂದಿದೆ ಎಂದು ತಿಳಿಸಿದರು.
ಈ ಬಂದರುಗಳ ಅಭಿವೃದ್ಧಿಯಿಂದ ಸರ್ಕಾರಕ್ಕೆ ಆದಾಯ ಬರಲಿದೆ ಎಂದ ಅವರು 30 ವರ್ಷದ ಅವಧಿಗೆ ಲೀಸ್ ಆಧಾರದ ಮೇಲೆ ಬಂದರುಗಳನ್ನು ಅಭಿವೃದ್ಧಿ ಪಡಿಸಲು ಕಂಪೆನಿಗಳಿಗೆ ನೀಡಲಾಗುವುದು ಎಂದರು.
ಇದೇವೇಳೆ ವಿದ್ಯಾ ವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಕೆಗೆ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ 80 ಲಕ್ಷ ಮೀಟರ್ ಬಟ್ಟೆ ಒದಗಿಸಲು ಕೋರಲಾಗಿದ್ದು, ಇದಕ್ಕೆ 44 ಕೋಟಿ ರೂ. ಹಣ ಖರ್ಚಾಗಲಿದೆ. ಜನವರಿಯಲ್ಲಿ ಸಮವಸ್ತ್ರಗಳನ್ನು ಶಿಕ್ಷಣ ಇಲಾಖೆಗೆ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.