ನವದೆಹಲಿ : 'ಬಿಜೆಪಿ'ಗೆ ತಾಕತ್ ಇದ್ದರೆ ದೆಹಲಿ ಚುನಾವಣೆ ಎದುರಿಸಿ ಗೆಲ್ಲಲಿ ಎಂದು ಸವಾಲೆಸದವರು ಬಿಜೆಪಿ ಪ್ರಧಾನಿಯನ್ನೇ ಬಳಸಿಕೊಂಡು ಅದಕ್ಕಿಂತಲೂ ಹೆಚ್ಚಿನ ಪ್ರಚಾರ ನಡೆಸುತ್ತಿದ್ದಾರೆ! ಇಂತಹ ಮಾಸ್ಟರ್ ಮೈಂಡ್ ಯಾರದ್ದು ಅಂದ್ಕೊಂಡ್ರಾ? ಇನ್ಯಾರದ್ದು, ಸರ್ಕಾರ ರಚಿಸಿ 49ನೇ ದಿನಗಳಲ್ಲಿ ರಾಜೀನಾಮೆ ನೀಡಿದ್ದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್!.
ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ದೆಹಲಿ ಚುನಾವಣೆ ಎದುರಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದರು. ಆದರೆ ಚುನಾವಣೆ ನಡೆಯುವುದು ಖಾತ್ರಿಯಾಗುತ್ತಿದ್ದಂತೆ ತಮ್ಮ ಪರ ಪ್ರಚಾರಕ್ಕೆ ಪ್ರಧಾನಿ ಮೋದಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ವೆಬ್ ಸೈಟ್ ನಲ್ಲಿ ಪ್ರಚಾರ ಆರಂಭಿಸಿರುವ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಗಾದಿಗೆ ಮೋದಿ, ಸಿ.ಎಂ ಗಾದಿಗೆ ಅರವಿಂದ್ ಕೇಜ್ರಿವಾಲ್ ಎಂದು ದೆಹಲಿಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ(ಡೆಲ್ಲಿ ಸ್ಪೀಕ್ಸ್, ಮೋದಿ ಫಾರ್ ಪಿ.ಎಂ, ಅರವಿಂದ್ ಕೇಜ್ರಿವಾಲ್ ಫಾರ್ ಸಿ.ಎಂ) ಎಂಬ ಘೋಷವಾಕ್ಯ ಅಪ್ ಡೇಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಕೇಜ್ರಿವಾಲ್ ಪಕ್ಷದ ನೂತನ ಘೋಷವಾಕ್ಯ ದೇಶಾದ್ಯಂತ ಅಪಹಾಸ್ಯಕ್ಕೀಡಾಗಿದೆ. ಇತ್ತೀಚೆಗಷ್ಟೇ, ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ್ದ ಅರವಿಂದ್ ಕೇಜ್ರಿವಾಲ್, ಮೋದಿ ಓರ್ವ ಅದ್ಬುತ ವಾಗ್ಮಿ ಎಂದು ಬಣ್ಣಿಸಿದ್ದರು. ಅಲ್ಲದೇ ತಾವು ಇನ್ನೆಂದಿಗೂ ರಾಜೀನಾಮೆ ನೀಡುವ ತಪ್ಪು ಮಾಡುವುದಿಲ್ಲ ಎಂದು ದೆಹಲಿ ಜನತೆಗೆ ತಿಳಿಸಿದ್ದರು.