ನವದೆಹಲಿ : 'ಈಶಾನ್ಯ ರಾಜ್ಯ'ದ ಗಡಿ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದೆಂದು ತಾಕೀತು ಮಾಡಿದ್ದ ಚೀನಾಕ್ಕೆ ಭಾರತ ಸರ್ಕಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ತಾನು ಗಡಿ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದಾಗಿ ತಿರುಗೇಟು ನೀಡಿದೆ.
ಚೀನಾ ಎಚ್ಚರಿಕೆ ಬಗ್ಗೆ ನವದೆಹಲಿಯಲ್ಲಿ ನ.1ರಂದು ಪ್ರತಿಕ್ರಿಯಿಸಿರುವ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, ತನ್ನ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ರೈಲ್ವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಚೀನಾಕ್ಕೆ ಹೇಗೆ ಹಕ್ಕಿದೆಯೋ ಹಾಗೆಯೇ ಅರುಣಾಚಲ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಭಾರತ ಸರ್ಕಾರಕ್ಕೂ ಹಕ್ಕಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ 60 ವರ್ಷಗಳಿಂದ ಯಾವ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲವೋ ಅದನ್ನು ನಾವು ಮಾಡುತ್ತೇವೆ. ನನ್ನ ಈ ಹೇಳಿಕೆ ಬಗ್ಗೆ ಚೀನಾ ಆಕ್ಷೇಪ ವ್ಯಕ್ತಪಡಿಸಬಾರದು ಎಂದು ಕಿರಣ್ ರಿಜಿಜು ಅಲ್ಲಿನ ಸರ್ಕಾರಕ್ಕೆ ಹೇಳಿದ್ದಾರೆ.
ಭಾರತ ಸರ್ಕಾರ ಚೀನಾ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ. ಎಲ್ಲವೂ ನಡೆಯುತ್ತಿರುವುದು ಭಾರತದ ಗಡಿ ಪ್ರದೇಶದಲ್ಲಿ. ಅರುಣಾಚಲ ಪ್ರದೇಶದಿಂದ ನಾನು ಸಾಂವಿಧಾನಿಕವಾಗಿ ಆಯ್ಕೆಯಾಗಿರುವ ಸಂಸದನಾಗಿದ್ದೇನೆ. ನನ್ನ ಕೆಲಸಗಳನ್ನು ಪ್ರಶ್ನಿಸಲು ಚೀನಾಗೆ ಯಾವುದೇ ಅಧಿಕಾರವಿಲ್ಲ ಎಂದು ಕಿರಣ್ ರಿಜಿಜು ಕಿಡಿ ಕಾರಿದ್ದಾರೆ.
'ಅರುಣಾಚಲ ಪ್ರದೇಶ'ದಲ್ಲಿ 54 ಹೊಸ ಬಾರ್ಡರ್ ಪೋಸ್ಟ್ ಗಳನ್ನು ನಿರ್ಮಿಸುವ ಭಾರತ ಸರ್ಕಾರದ ಘೋಷಣೆಗೆ ಆತಂಕಗೊಂಡಿದ್ದ ಚೀನಾ, ಗಡಿ ವಿವಾದವನ್ನು ಉಲ್ಬಣವಾಗುವ ಯಾವುದೇ ನಿರ್ಧಾರಗಳನ್ನು ಕೈಗೊಳ್ಳದೇ ಇರಲು ಎಚ್ಚರಿಕೆ ನೀಡಿತ್ತು.