ನವದೆಹಲಿ : ಕ್ರೂರ ಮೃಗಗಳಿಂದ ನಡೆಯುವ ದುರ್ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಬೇಕೆಂದು ಆದೇಶಿಸಿ ಅರಣ್ಯಾಧಿಕಾರಿಗಳಿಗೆ ಕೇಂದ್ರ ಮೃಗಾಲಯ ಪ್ರಾಧಿಕಾರ ಅ.15ರಂದು ನೊಟೀಸ್ ಜಾರಿ ಮಾಡಿದೆ.
ಮೃಗಾಲಯಗಳಲ್ಲಿ ಕ್ರೂರ ಪ್ರಾಣಿಗಳ ಅಟ್ಟಹಾಸಕ್ಕೆ ಪ್ರವಾಸಿಗರು ಸಾವನ್ನಪ್ಪುವ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಅರಣ್ಯಾಧಿಕಾರಿಗಳು ಕೈಗೊಂಡಿರುವ ಸುರಕ್ಷತಾ ಕ್ರಮವನ್ನು ವಿವರಿಸಬೇಕೆಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
ರಾಜ್ಯದ ಬಳ್ಳಾರಿ, ಬೆಳಗಾವಿ, ಗದಗ, ಶಿವಮೊಗ್ಗ, ಬನ್ನೇರುಘಟ್ಟ, ಗುಲ್ಬರ್ಗಾ ಅರಣ್ಯಾಧಿಕಾರಿಗಳಿಗೆ, ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿಗಳಿಗೂ ಕೇಂದ್ರ ಮೃಗಾಲಯ ಪ್ರಾಧಿಕಾರ ನೊಟೀಸ್ ನೀಡಿದೆ.
ನವದೆಹಲಿಯಲ್ಲಿರುವ ಮೃಗಾಲಯದಲ್ಲಿ ವೀಕ್ಷಣೆಗೆಂದು ಬಂದಿದ್ದ ವಿದ್ಯಾರ್ಥಿಯ ಮೇಲೆ ಬಿಳಿ ಹುಲಿಯೊಂದು ದಾಳಿ ಮಾಡಿ ಆತನನ್ನು ಕೊಂದು ಹಾಕಿದ್ದ ಘಟನೆ ಸೆ.23ರಂದು ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೃಗಾಲಯ ಪ್ರಾಧಿಕಾರ, ಮೃಗಾಲಯಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮದ ಬಗ್ಗೆ ವಿವರಣೆ ಕೇಳಿ ನೊಟೀಸ್ ನೀಡಿದೆ.