ನವದೆಹಲಿ : ಗಡಿ ಭಾಗದಲ್ಲಿ ಪಾಕ್ ಸೈನಿಕರು ನಡೆಸುತ್ತಿರುವ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆ ನೀಡಿರುವ ಪ್ರತ್ಯುತ್ತರಕ್ಕೆ ಪಾಕಿಸ್ತಾನ ಬೆಚ್ಚಿಬಿದ್ದಿದೆ.
ಗಡಿ ಭಾಗದಲ್ಲಿ ಪರಿಸ್ಥಿತಿ ಮಿತಿ ಮೀರುತ್ತಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅ.8ರಂದು ಪಾಕಿಸ್ತಾನದ ದಾಳಿಗೆ ಪ್ರತಿ ದಾಳಿ ನಡೆಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪಾಕಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ.
ಸಂಪೂರ್ಣ ಸ್ವಾತಂತ್ರ್ಯ ಸಿಕ್ಕ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸುತ್ತಿರುವ ದಾಳಿಯ ತೀವ್ರತೆಗೆ ಪಾಕ್ ಅಕ್ಷರಶಃ ಬೆಚ್ಚಿದೆ. ಪಾಕಿಸ್ತಾನ ಭಾರತೀಯ ಸೇನೆಯಿಂದ ಇಂತಹ ಪ್ರತಿ ದಾಳಿಯನ್ನು ಊಹಿಸಿರಲಿಲ್ಲ ಎಂದು ಮಾಧ್ಯಮಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.
ಪಾಕ್ ದಾಳಿಗೆ ಗಡಿ ಭಾಗದಲ್ಲಿರುವ ಭಾರತೀಯರು ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿರುವ ಭಾರತೀಯ ಸೇನಾ ಪಡೆ ಕನಿಷ್ಠ 35 ಪಾಕಿಸ್ತಾನೀಯರ ಹತ್ಯೆ ಮಾಡಿದೆ. ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದಕ್ಕೂ ಮುನ್ನ, ವಾಯುಪಡೆಯ 82ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸದ್ಯದಲ್ಲೇ ಎಲ್ಲವೂ ಸರಿ ಹೋಗುತ್ತದೆ ಎಂದು ತಿಳಿಸಿದ್ದರು. ಈ ಮೂಲಕ ಪಾಕಿಸ್ತಾನದ ಅತಿಕ್ರಮಣ ನೀತಿಯನ್ನು ಪ್ರತಿದಾಳಿಯ ಮೂಲಕವೇ ನಿಗ್ರಹಿಸುವ ಸೂಚನೆ ನೀಡಿದ್ದರು. ಅದಕ್ಕೆ ತಕ್ಕಂತೆ ಗಡಿ ಭಾಗದಲ್ಲಿ ಭಾರತ ನಡೆಸುತ್ತಿರುವ ಪ್ರತಿದಾಳಿಗೆ ಪಾಕಿಸ್ತಾನ ತತ್ತರಿಸಿದೆ.
ಇದೇ ವೇಳೆ ಅಪ್ರಚೋದಿತ ಗುಂಡಿನ ದಾಳಿ ನಿಲ್ಲುವವರೆಗೂ ಪಾಕಿಸ್ತಾನದ ಸೇನಾಧಿಕಾರಿಗಳೊಂದಿಗೆ ಧ್ವಜ ಸಭೆ ನಡೆಸದೇ ಇರಲು ಭಾರತ ಸರ್ಕಾರ ಸೇನೆಗೆ ಸೂಚನೆ ನೀಡಿದೆ. ಭಾರತ ಮತ್ತು ಪಾಕಿಸ್ತಾನಿ ಸೇನಾಪಡೆಯ ಹಿರಿಯ ಅಧಿಕಾರಿಗಳು ಹಾಟ್ ಲೈನ್ ಮೂಲಕ 5ನಿಮಿಷ ನಡೆಸಿದ್ದ ಮಾತುಕತೆ ವಿಫಲವಾಗಿದೆ. ಉಭಯ ಪಡೆಗಳು ಕದನ ವಿರಾಮ ಉಲ್ಲಂಘನೆಗೆ ಪರಸ್ಪರ ನೀವೇ ಕಾರಣ ಎಂದು ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಗುಂಡಿನ ಮೊರೆತ ನಿಲ್ಲಿಸುವವರೆಗೂ ಪಾಕ್ ಜತೆ ಮಾತುಕತೆ ಇಲ್ಲ ಎಂದು ಭಾರತ ಸಾರಿದೆ.
ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಭಾರತ, ಪಾಕಿಸ್ತಾನಕ್ಕೆ ನೀಡಿರುವ ಪ್ರತ್ಯುತ್ತರದ ತೀವ್ರತೆ ಎಷ್ಟಿದೆಯೆಂದರೆ, ಭಾರತದ ದಾಳಿಯಿಂದ ತನ್ನ ದೇಶಕ್ಕೆ ಉಂಟಾಗಿರುವ ಯಾವುದೇ ಹಾನಿಯನ್ನು ವರದಿ ಮಾಡದಂತೆ ಪಾಕ್ ಮಾಧ್ಯಮಗಳಿಗೆ ಅಲ್ಲಿನ ಜನರಲ್ ಕಛೇರಿ, ಐ.ಎಸ್.ಐ ಕಟ್ಟಾಜ್ನೆ ಹೊರಡಿಸಿದೆ.