Manipal : ಪ್ರಸಾರ ಭಾರತಿ ಬೋರ್ಡ್ ನ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಎಂ.ವಿ ಕಾಮತ್(93 ) ನಿಧನರಾಗಿದ್ದಾರೆ. ಅ.9ರ ಬೆಳಿಗ್ಗೆ ಹೃದಯಾಘಾತದಿಂದ ಕಾಮತ್ ಮೃತಪಟ್ಟಿದ್ದಾರೆ.
ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 7.30ಕ್ಕೆ ತೀವ್ರ ಹೃದಯಾಘಾತಕ್ಕೊಳಗಾದ ಕಾಮತ್ ಕೊನೆಯುಸಿರೆಳೆದಿದ್ದಾರೆ.
ಖ್ಯಾತ ಲೇಖಕರಾಗಿದ್ದ ಇವರು ಕಾಲಿಂದಿ ರಂದೇರಿ ಅವರೊಂದಿಗೆ ಸೇರಿ ನರೇಂದ್ರ ಮೋದಿ-ದ ಆರ್ಕಿಟೆಕ್ಟ್ ಆಫ್ ಎ ಮಾಡರ್ನ್ ಸ್ಟೇಟ್ (2009), ರಿಪೋರ್ಟರ್ ಅಟ್ ಲಾರ್ಜ್ (2002) ಸೇರಿದಂತೆ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ.
ದ ಇಲ್ಯುಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾದ ಮಾಜಿ ಸಂಪಾದಕ ಹುದ್ದೆಯನ್ನು ಅಲಂಕರಿಸಿದ್ದ ಕಾಮತ್ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
1921 ಸೆಪ್ಟೆಂಬರ್ 7ರಂದು ಉಡುಪಿಯಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜ್ ನಲ್ಲಿ ಬಿಎಸ್ಸಿ ಪದವಿ ಪಡೆದ ಇವರು ಮುಂಬೈನಲ್ಲಿ ಫ್ರೀ ಪ್ರೆಸ್ ಜರ್ನಲ್ ನಲ್ಲಿ ವರದಿಗಾರರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು.
ಕಾಮತ್ ಅವರ ಮೃತದೇಹವನ್ನು ಉಡುಪಿಯ ಎಂಜಿಎ ಕಾಲೇಜು ಕ್ಯಾಂಪಸ್ನ ನೂತನ ರವೀಂದ್ರ ಮಂಟಪದಲ್ಲಿ ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆಯ ವರೆಗೆ ಸಾರ್ವಜನಿಕ ದರ್ಶನಕ್ಕಿರಿಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.