ಶ್ರೀನಗರ : ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ಎನ್ ಕೌಂಟರ್ ಗೆ ಉಗ್ರರು ಬಲಿಯಾಗಿದ್ದು, ಸೇನೆ ನಡೆಸಿದ ಗುಂಡಿನ ದಾಳಿಗೆ ಮೂವರು ಶಂಕಿತ ಉಗ್ರರನ್ನು ಹತ್ಯೆಗೈಯ್ಯಲಾಗಿದೆ.
ಇಲ್ಲಿನ ತಾಂಗಧಾರ್ ಸೆಕ್ಟರ್ ನಲ್ಲಿ ಗಡಿ ನಿಯಮ ಉಲ್ಲಂಘಿಸಿ ಒಳನುಸುಳಲು ಯತ್ನಿಸುತ್ತಿದ ಉಗ್ರರ ವಿರುದ್ಧ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ.
ಈ ಮೂವರು ಉಗ್ರರು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದವರಾಗಿದ್ದು, ಒಂದು ಎಕೆ-47, ರಾತ್ರಿ ವೇಳೆ ನೋಡುವ ದೂರದರ್ಶಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ನಡುವೆ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, 24 ಗಂಟೆಗಳಲ್ಲಿ 2ನೇ ಬಾರಿ ಗಡಿ ನಿಯಮ ಉಲ್ಲಂಘಸಿದೆ.
ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಗೆ ಐವರು ನಾಗರಿಕರು ಬಲಿಯಾಗಿದ್ದಾರೆ.
ಜಮ್ಮು-ಕಾಶ್ಮೀರದ ಪೂಂಚ್ ವಲಯದಲ್ಲಿನ ಬಿಜಿ ಸೆಕ್ಟರ್ ನಲ್ಲಿ ಮುಂಜಾನೆ ಪಾಕ್ ಸೇನೆ ಮತ್ತೆ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಯೋಧರೂ ಪ್ರತಿ ದಾಳಿ ನಡೆಸಿದ್ದಾರೆ. ಉಭಯ ಸೈನಿಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.