ಬೆಂಗಳೂರು : ಮಾಜಿ ಮುಖ್ಯಮಂತ್ರಿ ಜಯಲಲಿತಾ ಪ್ರಕರಣವನ್ನು ತಮಿಳುನಾಡಿಗೆ ವರ್ಗಾವಣೆ ಮಾಡುವಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಯಲಲಿತಾ ಪ್ರಕರಣವನ್ನು ತಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತೀರ್ಪು ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂದರು.
ನಿತ್ಯ ಸಾವಿರಾರು ಎಐಎಡಿಎಂಕೆ ಕಾರ್ಯಕರ್ತರು ತಮಿಳುನಾಡಿನಿಂದ ರಾಜ್ಯಕ್ಕೆ ಆಗಮಿಸುತ್ತಿದ್ದು, ಜಯಲಲಿತಾ ಅವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಪೊಲೀಸರು ನಿರಾಕರಿಸಿದಾಗ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದಾಗಿ ಅಗತ್ಯವಿರುವ ಸ್ಥಳಗಳಲ್ಲಿ ನಿಯೋಜನೆಗೊಳ್ಳಬೇಕಾದ ಪೊಲೀಸರೂ ಪ್ರತಿಭಟನೆ ತಡೆಯಲು ಯತ್ನಿಸುತ್ತಿದ್ದಾರೆ. ಹೀಗಾಗಿ ಇದಕ್ಕಾಗಿಯೇ ವಿಶೇಷ ಪೊಲೀಸರನ್ನು ನಿಯೋಜಿಸಬೇಕು. ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದ್ದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದರು.
ಅಲ್ಲದೇ ಅಪರಾಧಿ ಸ್ಥಾನದಲ್ಲಿರುವವರ ಆರೋಗ್ಯ ತಪಾಸಣೆ ಸೇರಿದಂತೆ ಇತರ ಹಲವು ಆರ್ಥಿಕ ವೆಚ್ಚವೂ ಸರ್ಕಾರದ ಮೇಲೆಯೇ ಬಿಳುತ್ತಿದೆ. ಈ ಕಾರಣಗಳಿಂದಾಗಿ ಪ್ರಕರಣವನ್ನು ತಮಿಳುನಾಡಿಗೆ ವರ್ಗಾಯಿಸುವುದು ಉತ್ತಮ ಎಂದು ತಿಳಿಸಿದರು.
ಕಾವೇರಿ ನದಿ ನೀರಿನ ವಿಚಾರವನ್ನು ಬಿಟ್ಟರೆ ನ್ಕನ್ನಡಿಗರು ಮತ್ತು ತಮಿಳರು ಸಹೋದರರಂತಿದ್ದು, ಈ ವಿಚಾರದಲ್ಲಿ ಅನಗತ್ಯವಾಗಿ ಕನ್ನಡಿಗರನ್ನು ಎಳೆದು ತರಲಾಗುತ್ತಿದೆ ಎಂದರು.