ನವದೆಹಲಿ : ಮಹಾತ್ಮಾ ಗಾಂಧೀಜಿ ಕ್ವೀಟ್ ಇಂಡಿಯಾ, ಕ್ಲೀನ್ ಇಂಡಿಯಾ ಘೋಷಣೆ ಮಾಡಿದ್ದರು, ಅಂದು ಭಾರತವನ್ನು ಗುಲಾಮಗಿರಿಯಿಂದ ಮುಕ್ತ ಮಾಡಿದ್ದರು, ಆದರೆ ಗಾಂಧೀಜಿಯವರ ಕ್ಲೀನ್ ಇಂಡಿಯಾ ಕನಸು ಇನ್ನೂ ನನಸಾಗಿಲ್ಲ, ಸ್ವಚ್ಛ ಭಾರತ ಅಭಿಯಾನದ ಮೂಲಕ, ದೇಶವನ್ನು ಕಸ ಮುಕ್ತ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದರು.
ದೆಹಲಿಯ ವಾಲ್ಮೀಕಿ ಬಸ್ತಿಯಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ರಾಜಪಥ್ ಗೆ ಆಗಮಿಸಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಭಕ್ತಿಯಿಂದ ಎಲ್ಲರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು, ದೇಶವನ್ನು ನಿರ್ಮಲ ಭಾರತವನ್ನಾಗಿ ಮಾಡೀ, ಗಾಂಧೀಜಿ ಕನಸು ನನಸು ಮಾಡೋಣ ಎಂದರು.
ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ, ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವೂ ಕೂಡ. ಲಾಲ್ ಬಹದ್ದೂರ್ ಶಾಸ್ತ್ರಿ ಜೈ ಜವಾನ್, ಜೈ ಕಿಸಾನ್ ಎಂದು ಹೇಳಿದ್ದರು. ಗಾಂಧೀಜಿ ಕ್ವೀಟ್ ಇಂಡಿಯಾ, ಕ್ಲೀನ್ ಇಂಡಿಯಾ ಘೋಷಣೆ ಮಾಡಿದ್ದರು. ಅಂದು ಭಾರತವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಆದರೆ ಗಾಂಧೀಜಿಯವರ ಕ್ಲೀನ್ ಇಂಡಿಯಾ ಕನಸು ಇನ್ನೂ ನನಸಾಗಿಲ್ಲ. ಯಾವ ಕನ್ನಡಕದಿಂದ ಗಾಂಧೀಜಿ ನೋಡುತ್ತಿದ್ದರೋ, ಅದೇ ಕನ್ನಡವನ್ನು ನಾವು ಕ್ಲೀನ್ ಇಂಡಿಯಾ ಅಭಿಯಾನದ ಲೋಗೋವನ್ನಾಗಿ ಮಾಡಿಕೊಂಡಿದ್ದೇವೆ. ಗಾಂಧೀಜಿ ಕನ್ನಡಕದ ಮೂಲಕ ಎಲ್ಲವನ್ನೂ ನೋಡುತ್ತಿದ್ದಾರೆ. ಗಾಂಧೀಜಿ ಸ್ವಚ್ಛ, ಅಭಿವೃದ್ಧಿ ಭಾರತದ ಕನಸು ಕಂಡಿದ್ದರು. ದೇಶಾದ್ಯಂತ ಸ್ವಚ್ಚತೆಯನ್ನು ಕಾಪಾಡುವ ಮೂಲಕ, ಸ್ವಚ್ಛತೆಯಲ್ಲಿ ಭಾಗವಹಿಸುವ ಮೂಲಕ ಅವರ ಕನಸನ್ನು ನನಸು ಮಾಡೋಣ ಎಂದರು.
ದೇಶದ ಅಭಿವೃದ್ಧಿಗಾಗಿ ಹಲವು ಸರ್ಕಾರಗಳು ಶ್ರಮವಹಿಸಿವೆ, ವಿವಿಧ ಸ್ತರದ ಜನರು ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ, ಈ ಹಿಂದಿನ ಎಲ್ಲಾ ಸರ್ಕಾರಗಳಿಗೂ ನಾನು ನಮನ ಸಲ್ಲಿಸುತ್ತೇನೆ. ಎಲ್ಲಾ ರಾಜ್ಯ ಸರ್ಕಾರಗಳು ಕೂಡ ಸ್ವಚ್ಛ ಭಾರತ ಅಭಿಯಾನಕ್ಕೆ ಸಹಕಾರಿಯಾಗಿವೆ. ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದ ಮೋದಿ, ದೇಶದ ಜನರು ಹೇಗೆ ಭಾರತ ಮಾತೆಯ ಸಂತತಿಯೋ, ಹಾಗೇ ಪ್ರಧಾನಿ ಕೂಡ ಭಾರತ ಮಾತೆಯ ಸಂತತಿ. ದೇಶದ 125 ಕೋಟಿ ಜನರು ಕೂಡ ಭಾರತ ಮಾತೆಯ ಮಕ್ಕಳೇ ಎಂದರು.
ನಮ್ಮ 5 ವರ್ಷದ ಯೋಜನೆ ಸ್ವಚ್ಛತೆ. ಈ ಅಭಿಯಾನಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ, ರಾಷ್ಟ್ರ ಭಕ್ತಿಯಿಂದ ನಾವೆಲ್ಲರೂ ಸೇರಿ ಸ್ವಚ್ಛತೆಯಲ್ಲಿ ಭಾಗವಹಿಸೋಣ. ಗಾಂಧೀಜಿ ದೇಶದ ಎಲ್ಲೆಡೆ ಭಾಗಿಯಾಗಿರಲಿಲ್ಲ, ಆದರೆ ದೇಶಾದ್ಯಂತ ಆಂದೋಲನ ಮಾಡಿದ್ದರು. ಹಾಗೆಯೇ ನಾವು ಸ್ವಚ್ಛತೆಯನ್ನು ಜನಾಂದೋಲನವನ್ನಾಗಿ ಪರಿವರ್ತಿಸೋಣ, 2019ರ ವೇಳೆಗೆ ಭಾರತವನ್ನು ಕಸ ಮುಕ್ತಗೊಳಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ಸ್ವಚ್ಛತಾ ಅಭಿಯಾನದ ಬಗ್ಗೆ ಸೋಷಿಯಲ್ ಮೀಡಿಯಾ, ಫೇಸ್ ಬುಕ್, ಟ್ವಿಟರ್ ಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಅರಿವು ಮೂಡಿಸಲಾಗಿದೆ. ನಾನು ಸಾಮಾಜಿಕ ಜಾಲತಾಣಗಳ ಮೂಕ ಆಮೀರ್ ಖಾನ್, ಸಲ್ಮಾನ್ ಖಾನ್, ಪ್ರಿಯಾಂಕಾ ಛೋಪ್ರಾ, ಕಮಲ್ ಹಾಸನ್, ಬಾಬಾ ರಾಮ್ ದೇವ್, ಗೋವಾ ರಾಜ್ಯಪಾಲೆ ಮೃದುಲಾ ಸೇರಿದಂತೆ 9 ಜನರಿಗೆ ಆಹ್ವಾನ ನೀಡಿದ್ದೇನೆ. ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವಂತೆ ತಿಳಿಸಿದ್ದೇನೆ. ದಾರಾವಾಹಿಗಳ ಮೂಲಕವೂ ಈ ಕಾರ್ಯ ಮುಂದುವರೆಯಲಿ ಎಂದರು.
ಈ ಅಭಿಯಾನ ಕೇವಲ ಸರ್ಕಾರ, ಮಂತ್ರಿಗಳದ್ದು ಮಾತ್ರವಲ್ಲ, ದೇಶದ 125 ಕೋಟಿ ಜನರದ್ದೂ ಆಗಿದೆ. ಸ್ವಚ್ಛ ಭಾರತ ನಿರ್ಮಾಣ ಜನಸಾಮಾನ್ಯರದ್ದೂ ಆಗಿದೆ. ರಾಷ್ಟ್ರ ಭಕ್ತಿಯಿಂದ ಈ ಕೆಲಸ ಮಾಡೋಣ ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ ದೇಶದ ಜನರಿಗೆ ಸ್ವಚ್ಛ ಭಾರತ ಶಪಥ ಬೋಧಿಸಿದರು. ’ಸ್ವಚ್ಛತೆಗೆ ನಾನು ಬದ್ಧನಾಗಿದ್ದೇನೆ. ಪ್ರತಿ ವರ್ಷ 100 ತಾಸು ಅಂದರೆ ವಾರಕ್ಕೆ 2 ತಾಸು ಸಮಯವನ್ನು ಸ್ವಚ್ಛತಾ ಕಾರ್ಯಕ್ಕಾಗಿ ಮೀಸಲಿಡುತ್ತೇನೆ. ನಾನು ಕಸ ಎಸೆಯುವುದಿಲ್ಲ ಮತ್ತು ಇತರರಿಗೆ ಎಸೆಯಲು ಬಿಡುವುದಿಲ್’ ಎಂದು ಪ್ರತಿಜ್ನೆ ಮಾಡಿಸಿದರು.