ನವದೆಹಲಿ : ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಮೂಲಕ ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನ ಆರಂಭವಾಗಿದೆ.
ನವದೆಹಲಿಯ ವಾಲ್ಮೀಕಿ ಬಸ್ತಿಯಲ್ಲಿ ಪೊರಕೆ ಹಿಡಿದ ಪ್ರಧಾನಿ ಮೋದಿ ರಸ್ತೆಯಲ್ಲಿ ಕಸ ಗುಡಿಸುವ ಮೂಲಕ ಕ್ಲೀನ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಮೂಲಕ ಮಹಾತ್ಮಾ ಗಾಂಧೀಜಿಯವರ ನಿರ್ಮಲ ಭಾರತ ಕನಸು ನನಸು ಮಾಡುವ ಸಂಕಲ್ಪ ಮಾಡಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.
ಇಂದು ಗಾಂಧೀಜಿಯವ 145ನೇ ಜನ್ಮ ದಿನಾಚರಣೆಯಾಗಿದ್ದು, 2019ರ 150ನೇ ಜನ್ಮದಿನೋತ್ಸವದಂದು ಭಾರತವನ್ನು ನಿರ್ಮಲ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 2 ಲಕ್ಷ ಕೋಟಿ ರೂ ವಿನಿಯೋಗ ಮಾಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರ ಕ್ಲೀನ್ ಇಂಡಿಯಾ ಅಭಿಯಾನ ಕರೆಗೆ ಓಗುಟ್ಟು ಕೇಂದ್ರದ ಸುಮಾರು 31 ಲಕ್ಷ ನೌಕರರು ಸ್ವಚ್ಛತೆಯ ಪ್ರತಿಜ್ನೆ ಕೈಗೊಳ್ಳಲಾಯಿತು. ಇದೇ ವೇಳೆ ದೇಶಾದ್ಯಂತ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಸ್ವಚ್ಛತೆಯ ಶಪತ ಗ್ರಹಣ ಮಾಡಿ ಸರ್ಕಾರಿ ನೌಕರರು ಕೂಡ ಸ್ವಚ್ಛತೆ ಆರಂಭಿಸಿದ್ದಾರೆ. ಈ ಮೂಲಕ ದೇಶಾದ್ಯಂತ ಸ್ವಚ್ಛತಾ ಅಭಿಯಾನ ಆರಂಭಗೊಂಡಿದೆ.