ಮೈಸೂರು : ಏನಾದರಾಗೋಣ ಮೊದಲು ನಾವು ಮಾನವರಾಗೋಣ, ಮೊದಲು ನಾವು ಮಾನವತಾವಾದ ಕಲಿಯೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡ ಜನತೆಗೆ ಕರೆ ನೀಡಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ದೊರೆತ ಬಳಿಕ ಮಾತನಾಡಿದ ಅವರು, ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಿದ ಸಾಹಿತಿ ಗಿರೀಶ್ ಕಾರ್ನಾಡ್ ರನ್ನು ಅಭಿನಂದಿಸಿದರು.
ನಾನು ನಿಮಗೆಲ್ಲ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಏನಾದರಾಗೋಣ, ಮೊದಲು ನಾವು ಮಾನವರಾಗೋಣ. ಮೊದಲು ನಾವು ಮಾನವತಾವಾದ ಕಲಿಯೋಣ. ಸಮಾಜಮುಖಿಯಾಗಿ ನಾವು ಬಾಳಬೇಕಾಗಿದೆ. ನಾನೂ ಸಹ ದೇವಾಲಯಗಳಿಗೆ ಪೂಜೆ ಸಲ್ಲಿಸುವೆ. ಆದರೆ ಅದನ್ನೇ ನನ್ನ ಅಭ್ಯಾಸ ಮಾಡಿಕೊಂಡಿಲ್ಲ, ಜನರ ಭಾವನೆಗಳಿಗೆ ಸ್ಪಂದಿಸಬೇಕಾದ ಅಗತ್ಯವಿದೆ ಎಂದರು.
ಕಾರ್ನಾಡ್ ಒಬ್ಬ ಶ್ರೇಷ್ಠ ಸಾಹಿತಿ, ಉತ್ತಮ ಕಲಾವಿದ. ಆಸ್ತಿಕ, ನಾಸ್ತಿಕರ ಬಗ್ಗೆ ವಿವರ ನೀಡಿದ್ದಾರೆ. ಕಾರ್ನಾಡ್ ರಿಂದ ದಸರಾ ಉದ್ಘಾಟನೆಗೆ ವಿರೋಧಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ. ನಾಸ್ತಿಕರ ಬಗ್ಗೆ ಆರೋಗ್ಯಕರ ಚರ್ಚೆಯಾಗಬೇಕು ಎಂದು ತಿಳಿಸಿದರು.
ನಾನು ನಾಸ್ತಿಕ ಎಂದು ಹಲವರು ಹೇಳಿಕೆ ನೀಡಿದ್ದಾರೆ. ನಾನೂ ಕೂಡ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸುತ್ತೇನೆ. ಆದರೆ ಅದನ್ನೇ ನಾನು ಅಭ್ಯಾಸ ಮಾಡಿಕೊಂಡಿಲ್ಲ. ಸತ್ಯವೇ ಸ್ವರ್ಗ, ಮಿಥ್ಯವೇ ನರಕ ಎಂಬುದನ್ನು ತಿಳಿಯಿರಿ ಎಂದರು.
1610ರಲ್ಲಿ ಮೈಸೂರು ದಸರಾ ಆರಂಭವಾಯಿತು. ಮೈಸೂರು ದಸರಾಗೆ 400 ವರ್ಷಗಳ ಇತಿಹಾಸವಿದೆ. ಮೈಸೂರು ದಸರಾ ನಮ್ಮ ನಾಡಹಬ್ಬ. ಎಲ್ಲಾ ಜನಾಂಗದವರೂ ನಾಡಹಬ್ಬ ಆಚರಿಸುತ್ತಾರೆ. ದಸರಾ ಒಂದು ಧರ್ಮಕ್ಕೆ ಸೇರಿದ್ದಲ್ಲ ಎಂದು ವಿವರಿಸಿದರು.
ರಾಜ್ಯದ 7 ಜಿಲ್ಲೆಗಳಲ್ಲಿ ಬರಪರಿಸ್ಥಿತಿಯಿದೆ. ಹಲವು ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದಾಗಿ ಬೆಳೆಹಾನಿಯಾಗಿದೆ. ದಸರಾ ನಾಡಹಬ್ಬ ವಾದ್ದರಿಂದ ನಿಲ್ಲಿಸಲಾಗಲ್ಲ. ರಾಜ್ಯದಲ್ಲಿ ಜನ ಪ್ರೀತಿ ವಿಶ್ವಾಸದಿಂದ ಬದುಕುವಂತಾಗಬೇಕು. ಸಮಸ್ತ ನಾಡ ಜನತೆಗೆ ನಾಡಹಬ್ಬದ ಶುಭಾಷಯಗಳು ಎಂದು ಶುಭಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳಯಾನ ಯಶಸ್ವಿಯಾದ ನಿಟ್ಟಿನಲ್ಲಿ ಇಸ್ರೋ ವಿಜ್ನಾನಿಗಳಿಗೆ ಅಭಿನಂದನೆ ತಿಳಿಸಿದರು.