ಬೆಂಗಳೂರು : ರಾಜ್ಯದಲ್ಲಿ ಶೇ.24.1 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆಯಿದ್ದು ಜನಸಂಖ್ಯೆಗೆ ಅನುಗುಣವಾಗಿ ರೂ 15,834.16 ಕೋಟಿ ಈ ಸಮುದಾಯದ ಕಲ್ಯಾಣ ಕಾರ್ಯಕ್ರಮಗಳಿಗೆ ಖರ್ಚು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು ರಾಜ್ಯದ ಎಸ್ಸಿ/ಎಸ್ಟಿ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಹಣ ವಿಯೋಗಿಸಲು ಸಿದ್ಧಪಡಿಸಲಾಗಿದ್ದ ಕ್ರಿಯಾ ಯೋಜನೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ತಂದು ಇನ್ನು 2 ವಾರಗಳಲ್ಲಿ ಈ ಕ್ರಿಯಾ ಯೋಜನೆಗೆ ಅಂತಿಮ ರೂಪ ನೀಡಲಾಗುವುದು ಎಂದರು.
ಈ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಬಧ್ರತೆ ದೃಷ್ಟಿಯಿಂದ ಆದ್ಯತಾ ಕ್ಷೇತ್ರಗಳಾದ ವಸತಿ, ಶಿಕ್ಷಣ, ನೀರಾವರಿ, ಉದ್ಯೋಗ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಹಣವನ್ನು ವಿನಿಯೋಗಿಬೇಕು ಎಂದ ಅವರು, ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಪಂಗಡಗಳ ಉಪಯೋಜನೆ ಅಧಿನಿಯಮ ಜಾರಿಗೆ ಬಂದಿದ್ದು ಅಭಿವೃದ್ಧಿ ಪರಿಷತ್ತಿನ ಸಭೆ ನಡೆದಿದ್ದು, ಆದಷ್ಟು ಬೇಗ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಿ ಇನ್ನೂ 6 ತಿಂಗಳಲ್ಲಿ ಈ ಯೋಜನೆಯಡಿ ಮೀಸಲಿರುವ ಹಣವನ್ನು ಖರ್ಚು ಮಾಡಲಾಗುವುದು. ಈ ಕಾಯ್ದೆ 2014 ರ ಏಪ್ರಿಲ್ ನಿಂದ ಜಾರಿಗೆ ಬಂದಿದ್ದು ದೇಶದಲ್ಲಿ ಈ ಕಾಯ್ದೆ ಜಾರಿಗೆ ತಂದ 2ನೇ ರಾಜ್ಯದ ನಮ್ಮದಾಗಿದೆ. ನಾವು ತಂದಿರುವ ಈ ಕಾಯ್ದೆ ಹೆಚ್ಚು ಪರಿಣಾಕಾರಿ ಹಾಗೂ ಪ್ರಗತಿಪರ ಕಾಯ್ದೆಯಾಗಿದೆ ಎಂದು ತಿಳಿಸಿದರು.
ಈ ಯೋಜನೆಯಡಿ ಮೀಸಲಿರುವ ಹಣ ಖರ್ಚು ಮಾಡಬೇಕು. ಅಧಿಕಾರಿಗಳು ಈ ಯೋಜನೆ ಜಾರಿಗೆ ತರಲು ಮತ್ತು ಹಣ ಖರ್ಚುಮಾಡಲು ನಿರ್ಲಕ್ಷ ತೋರಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.