BW News Bureau : ಕೃತಿ ಚೌರ್ಯ ಆರೋಪ ಎದುರಿಸುತ್ತಿರುವ ಜ್ನಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಸೆ.22ರಂದು ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ಗೆ ಹಾಜರಾಗಿದ್ದಾರೆ.
ನಾಗಮಂಡಲ ನಾಟಕದಲ್ಲಿ ಅನುಮತಿ ಇಲ್ಲದೇ ತಮ್ಮ 'ಮಾಯದೋ ಮನದ ಭಾರ' ಹಾಡನ್ನು ಬಳಸಿಕೊಂಡಿದ್ದಾರೆ ಎಂದು ಸಾಹಿತಿ ಗೋಪಾಲ ವಾಜಪೇಯಿ ಆರೋಪಿಸಿ, ಕಾರ್ನಾಡ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದರು.
ಈ ದೂರಿಗೆ ಸಂಬಂಧಿಸಿದಂತೆ ಗಿರೀಶ್ ಕಾರ್ನಾಡ್ ಗೆ ನ್ಯಾಯಾಲಯ ಸಮನ್ಸ್ ಕೂಡಾ ಜಾರಿ ಮಾಡಿತ್ತು. ಸನಮ್ಸ್ ಜಾರಿ ಹಿನ್ನೆಲೆಯಲ್ಲಿ ಕಾರ್ನಾಡ್ ಕೋರ್ಟ್ ಎದುರು ಹಾಜರಾಗಿದ್ದಾರೆ.
ಅನುಮತಿ ನಿರಾಕರಿಸಿದ ಬಳಿಕವೂ ತಾವು 1989ರಲ್ಲಿ ಬರೆದ ಹಾಡುಗಳ ಪೈಕಿ ಒಂದನ್ನು ಗಿರೀಶ್ ಕಾರ್ನಾಡ್, ತಮ್ಮ ನಾಗಮಂಡಲ ನಾಟಕದಲ್ಲಿ ಬಳಸಿಕೊಂಡಿದ್ದಾರೆ ಎಂಬುದು ಗೋಪಾಲ್ ವಾಜಪೇಯಿ ಅವರ ಗಂಭೀರ ಆರೋಪವಾಗಿದೆ.
'1989ರಲ್ಲಿ ಬರೆದ ಹಾಡುಗಳ ಪೈಕಿ ಒಂದನ್ನು ಗಿರೀಶ್ ಕಾರ್ನಾಡ್, ತಮ್ಮ ನಾಗಮಂಡಲ ನಾಟಕದಲ್ಲಿ ಬಳಸಿಕೊಳ್ಳುವುದಾಗಿ ಅನುಮತಿ ಕೇಳಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಿದ್ದೆ. ಆದರೆ ನಾಗಮಂಡಲ ನಾಟಕದ ಗೀತೆ ರಚನೆಯಲ್ಲಿ ನನ್ನ ಹೆಸರಿಲ್ಲ. 2005ರ ಕೃತಿಯಲ್ಲೂ ನನ್ನ ಹಾಡು ಬಳಸಿಕೊಳ್ಳಲಾಗಿದೆ. 2008ರ ಸಮಗ್ರ ನಾಟಕ ಕೃತಿಯಲ್ಲಿಯೂ ಈ ಹಾಡನ್ನು ಬಳಸಿಕೊಳ್ಳಲಾಗಿದೆ. ನನ್ನ ಹೆಸರು ಉಲ್ಲೇಖಿಸದೇ ಇರುವುದರಿಂದ ಅನುಮತಿಯನ್ನು ವಾಪಸ್ ಪಡೆದಿದ್ದೇನೆ. 2008ರಲ್ಲಿ ಇನ್ನು ಮುಂದೆ ನಿಮ್ಮ ಹಾಡನ್ನು ಬಳಸಿಕೊಳ್ಳುವುದಿಲ್ಲ ಎಂದು ನನಗೆ ಕಾರ್ನಾಡ್ ಪತ್ರ ಬರೆದಿದ್ದರು ಎಂದು ತಿಳಿಸಿದ್ದರು. ಆನಂತರ 2009-2012ರ ನಾಗಮಂಡಲ ಪರಿಷ್ಕೃತ ನಾಟಕದಲ್ಲಿ ನನ್ನ ಹಾಡನ್ನು ಬಳಸಿಕೊಳ್ಳಲಾಗಿದೆ' ಎಂದು ಗೋಪಾಲ ವಾಜಪೇಯಿ ಕಾರ್ನಾಡ್ ವಿರುದ್ಧ ಆರೋಪಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ