ಬೆಂಗಳೂರು : ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇದೇ ಮೊದಲಬಾರಿಗೆ ರಾಜ್ಯಕ್ಕೆ ಆಗಮಿಸಲಿದ್ದು, ಮೋದಿ ಸ್ವಾಗತಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ.
ಸೆ.23ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಸನ್ಮಾನಕ್ಕೆ ಬಿಜೆಪಿ ಸಿದ್ಧತೆ ನಡೆಸಿದ್ದು, ಈ ಸಂಬಂಧ ಬಿಜೆಪಿ ನಾಯಕರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸನ್ಮಾನ ಸ್ವೀಕರಿಸಿದ ಬಳಿಕ ಮೋದಿ ರಾಜಭವನದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಸೆ.24ರಂದು ಇಸ್ರೋಗೆ ಭೆಟಿ ನೀಡಲಿದ್ದಾರೆ. ಬಳಿಕ ಬೆಂಗಳೂರಿನ ಹೊರವಲಯದಲ್ಲಿನ ಬ್ಯಾಲಾಳುವಿನಲ್ಲಿರುವ ಐಎಸ್ ಡಿನ್ (ಮಾಹಿತಿ ರವಾನೆ ಮತ್ತು ಸ್ವೀಕೃತಿ ಕೇಂದ್ರ)ಗೆ ಭೇಟಿ ನೀಡಲಿದ್ದಾರೆ.
ಇಸ್ರೋ ರವಾನಿಸಿರುವ ಮಂಗಳ ನೌಕೆ ಸೆ.24ರಂದು ಕಕ್ಷೆ ತಲುಪಲಿದೆ. ಅಂದು ಬೆಳಿಗ್ಗೆ 7ಗಂಟೆ 30 ನಿಮಿಷ 2 ಸೆಕೆಂಡ್ ಗೆ ಮಂಗಳ ನೌಕೆ ಕಕ್ಷೆ ತಲುಪಲಿದ್ದು, ಮಂಗಳ ಗ್ರಹದಿಂದ ಮೊದಲ ಮಾಹಿತಿಯನ್ನು ಐಎಸ್ ಡಿನ್ ಗೆ ರವಾನೆ ಮಾಡಲಿದೆ.
ಸೆ.24ರಂದು ಪ್ರಧಾನಿ ಮೋದಿ ಬೆಳಿಗ್ಗೆ 6:30ಕ್ಕೆ ಈ ಕೇಂದ್ರಕ್ಕೆ ಆಗಮಿಸಲಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಬಳಿಕ ಮೋದಿ ತುಮಕೂರಿಗೆ ತೆರಳಲಿದ್ದು, ಅಲ್ಲಿ ಫುಡ್ ಪಾರ್ಕ್ ಗೆ ಚಾಲನೆ ನೀಡಲಿದ್ದಾರೆ.