ಬೆಂಗಳೂರು : ನಿರ್ಮಲ ಭಾರತ, ಸುರಕ್ಷಿತ ಭಾರತಕ್ಕೆ ಬಿಜೆಪಿ ಮಹಿಳಾ ಕಾರ್ಯಕರ್ತರು ಭರ್ಜರಿ ತಯಾರಿ ನಡೆಸಿದ್ದಾರೆ.
ಮುಂಬರುವ ನಿವೇದಿತಾ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ದೃಷ್ಠಿಯಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಮಲ ಭಾರತ ಅಭಿಯಾನಕ್ಕೆ ಕೈ ಜೋಡಿಸುವ ದೃಷ್ಠಿಯಿಂದ ಪ್ರತಿ ಮಂಡಲದಲ್ಲಿ ಶೌಚಾಲಯ ಇಲ್ಲದ ಶಾಲೆಗಳನ್ನು ಗುರುತಿಸಿ ಕನಿಷ್ಠ 2 ಶಾಲೆಗಳಲ್ಲಿ ಶೌಚಾಲಯಗಳನ್ನು ಕಟ್ಟಿ ನಿವೇದಿತಾ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿದೆ.
ಕೇವಲ ಚುನಾವಣೆ ಮತ್ತು ಪ್ರತಿಭಟನೆಗಳಿಗೆ ಸೀಮಿತವಾಗದಂತೆ ಸಮಾಜದ ಬದಲಾವಣೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮಹಿಳಾ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಜಿಲ್ಲೆಯಲ್ಲಿನ ಶೈಕ್ಷಣಿಕ ಸಂಸ್ಥೆಗಳ, ಕಾರ್ಖಾನೆಗಳ ಸಂಘಟಿತ ಮತ್ತು ಅಸಂಘಟಿತ ವಲಯಗಳ ಪ್ರಮುಖರನ್ನು ಭೇಟಿ ಮಾಡಿ ಮಹಿಳಾ ಸುರಕ್ಷೆತೆಯ ಬಗ್ಗೆ ಸಂವಾದ ವಿಚಾರ ಸಂಕಿರಣಗಳನ್ನು ನಡೆಸುವಂತೆ ಮನವಿ ಮಾಡಿ ಆಯಾ ಜಿಲ್ಲಾ ಮಟ್ಟದಲ್ಲಿಯೇ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿಸುವ ಜವಾಬ್ದಾರಿಯನ್ನೂ ಮಹಿಳಾ ಕಾರ್ಯಕರ್ತರಿಗೆ ವಹಿಸಲಾಗಿದೆ.
ಈಗಾಗಲೇ ರಾಜ್ಯ ಮಹಿಳಾ ಮೋರ್ಚ 2010ರಿಂದ ಆರಂಭಿಸಿದ್ದ ಹಾಸ್ಟೆಲ್ ಸಮೀಕ್ಷೆ ಯಶಸ್ಸು ಕಂಡಿದೆ. ಈ ಬಾರಿಯೂ ಪ್ರತಿ ಮಂಡಲದಲ್ಲಿ 2 ಹಾಸ್ಟೆಲ್ ಗಳನ್ನು ಗುರುತಿಸಿ ಸಮೀಕ್ಷೆ ನಡೆಸಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.