ನವದೆಹಲಿ : ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನ ಐ.ಎಸ್.ಐ 30ಕ್ಕೂ ಅಧಿಕ ಉಗ್ರ ಘಟಕಗಳನ್ನು ರಚಿಸಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
ಈ ಘಟಕದ ನೆರವಿನಿಂದ ದಕ್ಷಿಣ ಭಾರತದಲ್ಲಿ 26/11 ಮಾದರಿಯ ದಾಳಿ ನಡೆಸುವ ಭಾರೀ ಸಂಚು ರೂಪಿಸಿದೆ ಎಂದು ಇತ್ತೀಚೆಗೆ ಚೆನ್ನೈನಲ್ಲಿ ಎನ್.ಐ.ಎಯಿಂದ ಬಂಧಿತನಾಗಿರುವ ಶ್ರೀಲಂಕಾ ಪ್ರಜೆ ಅರುಣ್ ಸೆಲ್ವರಾಜ್ ಬಾಯ್ಬಿಟ್ಟಿದ್ದಾನೆ.
ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ಮತ್ತು ಚೆನ್ನೈನಲ್ಲಿರುವ ಇಸ್ರೇಲ್ ಮತ್ತು ಅಮೆರಿಕ ರಾಯಭಾರಿ ಕಛೇರಿಗಳ ಮಾಹಿತಿಗಳನ್ನು ಐ.ಎಸ್.ಐಗೆ ರವಾನಿಸುತ್ತಿದ್ದ ಲಂಕಾ ಪ್ರಜೆ ಭಾರತೀಯ ತನಿಖಾ ಸಂಸ್ಥೆಗಳ ಕೈಗೆ ಸಿಕ್ಕಿಬಿದ್ದಿದ್ದ. ಸೆಲ್ವರಾಜನ್ ಕೂಡ ಇದೇ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮುಂಬೈ ಮಾದರಿಯಲ್ಲಿ ಚೆನ್ನೈನಲ್ಲಿ ದಾಳಿ ನಡೆಸಿ ಅಲ್ಲಿರುವ ಇಸ್ರೇಲ್ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಮಾಡುವ ಸಂಚನ್ನು ಐ.ಎಸ್.ಐ ಹೊಂದಿದೆ. ಇದಕ್ಕಾಗಿ 30ಕ್ಕೂ ಅಧಿಕ ಉಗ್ರ ಘಟಕಗಳನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಇದೆ ಎಂದು ಸೆಲ್ವರಾಜನ್ ವಿಚಾರಣೆ ವೇಳೆ ತಿಳಿಸಿದ್ದಾನೆ.