ಲಖ್ನೌ : ಒಂದು ವರ್ಷದ ಹುಡುಗ ಸಮಾಜದಲ್ಲಿ ಶಾಂತಿ ಭಂಗವನ್ನು ಉಂಟುಮಾಡಲು ಸಾಧ್ಯವೆ? ಉತ್ತರ ಪ್ರದೇಶ ಪೊಲೀಸರನ್ನು ಕೇಳಿ ನೋಡಿ ಹೌದು ಎನ್ನುತ್ತಾರೆ!
ಉಸ್ಮಾನ್ ಪುರದ ಬಾಲಕ ನಜೀಂ ಹಾಗೂ ಆತನ ತಂದೆ ಯಾಸೀನ್, ಉಪಚುನಾವಣೆ ಸಂದರ್ಭದಲ್ಲಿ ಮತಗಟ್ಟೆಗೆ ನುಗ್ಗಿ ದಾಂಧಲೆ ನಡೆಸುವ ಯತ್ನಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ವರದಿ ನೀಡಿದ್ದಾರೆ. ಇಷ್ಟೇ ಅಲ್ಲದೇ ಬಾಲಕ ನಜೀಂನನ್ನು ಗೂಂಡಾಗಳ ಲಿಸ್ಟ್ ಗೂ ಸೇರಿಸಲಾಗಿದೆ!. ಈ ಹಿನ್ನೆಲೆಯಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಿ.ಆರ್.ಪಿ.ಸಿ ಸೆಕ್ಷನ್ 107/16 ಅಡಿ ನಜೀಂ ಹಾಗೂ ಯಾಸೀನ್ ಗೆ ನೊಟೀಸ್ ಜಾರಿ ಮಾಡಿದೆ. ಈ ಮೂಲಕ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಬಹುದಾಗಿದೆ. ಪೊಲೀಸ್ ಬಂಧದ ಭೀತಿಯಿಂದ ಒಂದು ವರ್ಷದ ಬಾಲಕ ಹಾಗೂ ಆತನ ತಂದೆ ಸೆಕ್ಯುರಿಟಿ ಬಾಂಡ್ ಸಲ್ಲಿಸಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರ ಬಗ್ಗೆ ತಕುರ್ದ್ವರ ಕ್ಷೇತ್ರದ ಎಸ್.ಐ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ವರದಿ ನೀಡಬೇಕಿತ್ತು. ಉಸ್ಮಾನ್ ಪುರದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರ ಪಟ್ಟಿಯನ್ನು ಸಿದ್ಧಪಡಿಸುವಾಗ ಒಂದು ವರ್ಶದ ಬಾಲಕ ನಜೀಂ ಹಾಗೂ ಯಾಸೀನ್ ಹೆಸರನ್ನೂ ಸೇರಿಸಿರುವ ಯುಪಿ ಪೊಲೀಸರು ಯಡವಟ್ಟು ಮಾಡಿದ್ದಾರೆ.
ಪೊಲೀಸರು ಮಾಡಿರುವ ಯಡವಟ್ಟಿನ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಐ.ಜಿ ಗುಲಾಬ್ ಸಿಂಗ್, ಉದ್ದೇಶ ಪೂರ್ವಕವಾಗಿ ಒಂದು ವರ್ಷದ ಬಾಲಕನ ವಿರುದ್ಧ ವರದಿ ನೀಡಲಾಗಿದೆ, ಈ ಬಗ್ಗೆ ಇಲಾಖೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.