ನವದೆಹಲಿ : ಗಂಗಾ ನದಿ ಶುದ್ಧೀಕರಣ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕೈಜೋಡಿಸಲು ಇಸ್ರೆಲ್ ಮುಂದಾಗಿದೆ.
ನವದೆಹಲಿಯಲ್ಲಿ ನಡೆದ ನಮಾಮಿ ಗಂಗಾ ಯೋಜನೆಯ ಮೊದಲ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ 11 ಇಸ್ರೆಲ್ ಕಂಪನಿಗಳು ಈ ಬಗ್ಗೆ ತಿಳಿಸಿವೆ.
ಇಸ್ರೆಲ್ ನ ಆರ್ಥಿಕ ಮತ್ತು ವಾಣಿಜ್ಯ ನಿಯೋಗದ ಮುಖ್ಯಸ್ಥ ಯೊನಾತನ್ ಬೆಂಜಕನ್ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿಯವರನ್ನು ಭೇಟಿಯಾಗಿದ್ದು, ಗಂಗಾ ಶುದ್ಧೀಕರಣ ಯೋಜನೆಯಲ್ಲಿ ಭಾಗಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಜಲ ಶುದ್ಧೀಕರಣ ಮತ್ತು ಕೊಳಚೆ ನೀರು ನಿರ್ವಹಣೆಯಲ್ಲಿ ಇಸ್ರೆಲ್ ಅತ್ಯಾಧುನಿಕ ವಿಧಾನಗಳನ್ನು ಅಳವಡಿಸಿಕೊಂಡಿದೆ. ಈ ಅನುಭವ ಹಾಗೂ ಮಾಹಿತಿಯನ್ನು ಗಂಗಾ ಶುದ್ಧೀಕರಣ ಯೋಜನೆಗೆ ಒದಗಿಸಲು ಸಿದ್ಧವಿರುವುದಾಗಿ ಇಸ್ರೆಲ್ ಕಂಪನಿಗಳು ತಿಳಿಸಿವೆ.
ನಮಾಮಿ ಗಂಗಾ ಯೋಜನೆ ಗುರಿ ತಲುಪಬೇಕಾದರೆ ನದಿಗೆ ಹೊಸ ತ್ಯಾಜ್ಯ ಸೇರುವುದನ್ನು ತಡೆಯಲು ಮೊದಲು ಆದ್ಯತೆ ನೀಡಿ, ಹಳೆ ತ್ಯಾಜ್ಯಗಳನ್ನು ತೆಗೆದು ನದಿ ನೀರನ್ನು ಸ್ವಚ್ಛಗೊಳಿಸಬೇಕು ಎಂಬುದು ಪ್ರಧಾನಿ ಮೋದಿ ಅಭಿಪ್ರಾಯವಾಗಿದೆ.