ಚೆನ್ನೈ : 'ತಮಿಳುನಾಡು' ಮುಖ್ಯಮಂತ್ರಿ ಜಯಲಲಿತಾ, ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಶ್ರೀಲಂಕಾದಿಂದ ತಮಿಳುನಾಡಿನ ಮೀನುಗಾರರ ಬಂಧನಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಂ ಸ್ವಾಮಿ ನೀಡಿರುವ ಹೇಳಿಕೆ ಬಗ್ಗೆ ಸೆ.8ರಂದು ಚೆನ್ನೈನ ಕೋರ್ಟ್ ನಲ್ಲಿ ಜಯಲಲಿತಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಸರ್ಕಾರಿ ವಕೀಲ ಎಂ.ಎಲ್ ಜಗನ್, ಜಯಲಲಿತಾ ಪರ ಕೊರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ್ದು ಶ್ರೀಲಂಕಾದಿಂದ ತಮಿಳುನಾಡಿನ ಮೀನುಗಾರರ ಬಂಧನಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಮಾನನಷ್ಟಕರ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದೇ ವೇಳೆ ಸ್ವಾಮಿ ಅವರ ಹೇಳಿಕೆ ವರದಿ ಮಾಡಿದ್ದ ತಮಿಳುನಾಡು ಮೂಲದ ದಿನಮಲರ್ ಎಂಬ ಪತ್ರಿಕೆಯ ಸಂಪಾದಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ತಮಿಳುನಾಡು ಮೀನುಗಾರರು ಶ್ರೀಮಂತರಾಗಿದ್ದಾರೆ ಅಲ್ಲದೇ ಅವರು ಸಮುದ್ರದ ಸಂಪನ್ಮೂಲಗಳನ್ನು ನಾಶ ಮಾಡಲು ಯತ್ನಿಸುತ್ತಿರುವುದರಿಂದ ಅವರಿಂದ ವಶಪಡಿಸಿಕೊಳ್ಳಲಾದ ದೋಣಿಗಳನ್ನು ಬಿಡುಗಡೆ ಮಾಡದೇ ಇರಲು ಶ್ರೀಲಂಕಾ ಸರ್ಕಾರಕ್ಕೆ ಸ್ವಾಮಿ ಸಲಹೆ ನೀಡುವುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮಿ ವಿರುದ್ಧ ಜಯಲಲಿತಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.