ಬೆಂಗಳೂರು : ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ಎಸ್.ಸಂತೋಷ್ ಅವರು ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ತೆರವಾದ ಸ್ಥಾನಕ್ಕೆ ನೇಮಕಾತಿ ಕಸರತ್ತು ನಡೆಯುತ್ತಿದೆ.
ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ನಮೋ ಬ್ರಿಗೇಡ್ ನ ಮುಖಂಡ ಪ್ರದೀಪ್, ರಾಷ್ಟ್ರೀಯ ವಿದ್ಯಾರ್ಥಿ ಪರಿಷತ್ ಮೂಲದ ರವಿಕುಮಾರ್, ರಘುನಂದನ್ ಮತ್ತಿತರರ ಹೆಸರುಗಳು ಮುಖ್ಯವಾಗಿ ಕೇಳಿಬರುತ್ತಿದೆ. ಈ ಪೈಕಿ ಪ್ರಕಾಶ್ ಅವರನ್ನು ಸಂಘಪರಿವಾರದ ಮುಖಂಡರು ಕರೆಸಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸೆ.6 ಮತ್ತು 7ರಂದು ಉಡುಪಿಯಲ್ಲಿ ಸಂಘಪರಿವಾರದ ಪೂರ್ಣಾವಧಿ ಕಾರ್ಯಕರ್ತರ ಸಭೆ ನಡೆಯಲಿದ್ದು, ಸಭೆಯಲ್ಲಿ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಈ ವೇಳೆ ಸಂಘಟನಾ ಪ್ರಧಾನ ಕಾರ್ಯದರ್ಶಿಗೆ ಸೂಕ್ತರಾದವರನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
ಸಂಘಪರಿವಾರದ ಮುಖಂಡರು ಹಾಗೂ ಬಿಜೆಪಿ ನಾಯಕರು ಕೂಡ ಮಾತುಕತೆ ನಡೆಸಿದ್ದಾರೆ. ಬಿಜೆಪಿ ನಾಯಕರಿಗೆ ಸಮ್ಮತಿಯಾಗುವ ಹೆಸರನ್ನೇ ಸೂಚಿಸುವ ಪ್ರಯತ್ನವನ್ನು ಸಂಘಪರಿವಾರ ಮಾಡುತ್ತಿದೆಯಾದರೂ ಬಿಜೆಪಿ ನಾಯಕರು ಈ ವಿಚಾರದಲ್ಲಿ ಮೂಗುತೂರಿಸುವಂತಿಲ್ಲ.