ಮೈಸೂರು : ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಬಗ್ಗೆ ಸಮಗ್ರ ಮಾಹಿತಿ ಇರುವ ವೆಬ್ ಸೈಟ್ ನಲ್ಲಿ ಪ್ರಸಕ್ತ ಸಾಲಿನ ದಸರಾ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ.
ಆ.25ರಂದು ಜಿಲ್ಲಾಡಳಿತದಿಂದ ಪ್ರಾರಂಭವಾಗಿದ್ದ ದಸರಾ ವೆಬ್ ಸೈಟ್ ನಲ್ಲಿ ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಲಿದ್ದಾರೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಒಡೆಯರ್ ನಿಧನದ ಹಿನ್ನೆಲೆಯಲ್ಲಿ ಖಾಸಗಿ ದರ್ಬಾರ್ ಇರುವುದಿಲ್ಲ ಎಂದು ಈಗಾಗಲೇ ಮಹಾರಾಣಿ ಪ್ರಮೋದಾದೇವಿ ಸ್ಪಷ್ಟಪಡಿಸಿದ್ದಾರೆ. ಆದರೆ 2014ರ ದಸರಾ ಮಹೋತ್ಸವದ ಬಗ್ಗೆ ಮಾಹಿತಿ ಇರುವ ವೆಬ್ ಸೈಟ್ ನಲ್ಲಿ ಈಬಾರಿ ಖಾಸಗಿ ದರ್ಬಾರ್ ಇರಲಿದೆ ಎಂದು ಮಾಹಿತಿ ಪ್ರಕಟಿಸಲಾಗಿದೆ.
ಖಾಸಗಿ ಮಾಧ್ಯಮವೊಂದು ಈ ಬಗ್ಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ತಪ್ಪನ್ನು ಸರಿಪಡಿಸಿಕೊಳ್ಳಲು ಕ್ರಮ ಕೈಗೊಂಡಿದೆ. ದಸರಾ ವೆಬ್ ಸೈಟ್ ನಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ದಸರಾ ಹಾಗೂ ಮೈಸೂರಿನ ಪರಂಪರೆಯ ವಿವರಗಳನ್ನು ನೀಡಲಾಗಿದೆ. ಐಪ್ಯಾಡ್, ಐಫೋನ್, ಮೊಬೈಲ್ ಹಾಗೂ ಟ್ಯಾಬ್ಲೆಟ್ ಸೇರಿದಂತೆ ಇತರೆ ಆಧುನಿಕ ಸಾಧನಗಳಲ್ಲಿ ವೆಬ್ ಸೈಟ್ ನ್ನು ಸುಲಭವಾಗಿ ವೀಕ್ಷಣೆ ಮಾಡಬಹುದಾಗಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಪ ಪ್ರಸಾದ್ ಆ.25ರಂದು ಈ ನೂತನ ವೆಬ್ ಸೈಟ್ ನ್ನು ಉದ್ಘಾಟಿಸಿದ್ದರು. ದಸರಾ ಆರಂಭಕ್ಕೆ 15 ದಿನದ ಒಳಗೆ ಸಾಂಸ್ಕ್ರ್ರತಿಕ ಕಾರ್ಯಕ್ರಮಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದರು.