ನವದೆಹಲಿ : 'ಮಧ್ಯಪ್ರದೇಶ'ದಲ್ಲಿರುವ ಚಿತ್ರಕೂಟ ದೇವಾಲಯದಲ್ಲಿ ಕಾಲ್ತುಳಿತ ಉಂಟಾಗಿದ್ದು 10 ಜನರು ಮೃತಪಟ್ಟಿದ್ದು 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶ- ಉತ್ತರ ಪ್ರದೇಶದ ಮಧ್ಯಭಾಗದಲ್ಲಿ ಹರಡಿರುವ ವಿಂಧ್ಯ ಪರ್ವತ ಶ್ರೇಣಿಯ ಉತ್ತರ ಭಾಗದಲ್ಲಿ ಚಿತ್ರಕೂಟ ದೇವಾಲಯವಿದೆ.
ಸತ್ನಾ ಜಿಲ್ಲಾಧಿಕಾರಿ ಕಾಲ್ತುಳಿತ ಪ್ರಕರಣವನ್ನು ನ್ಯಾಯಾಧೀಶರ ತನಿಖೆ (magisterial inquiry)ಗೆ ಆದೇಶಿಸಿದ್ದಾರೆ. ಸೋಮವತಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಚಿತ್ರಕೂಟದ ಭರತ್ ಮಿಲಾಪ್ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪೂಜೆ ಅಂಗವಾಗಿ 'ಶಯನ ಪ್ರದಕ್ಷಿಣೆ' ನಡೆಸುವ ಸಂದರ್ಭದಲ್ಲಿ ಭಕ್ತಾದಿಗಳು ಕಾಲ್ತುಳಿತಕ್ಕೆ ಸಿಲುಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಚಿತ್ರಕೂಟಕ್ಕೆ ರಾಮಾಯಣ ಕಾಲದ ಐತಿಹ್ಯವಿದ್ದು ರಾಮ-ಸೀತಾ ಮತ್ತು ಲಕ್ಷ್ಮಣ ತಮ್ಮ ವನಸವಾಸದ ಹದಿನಾಲ್ಕು ವರ್ಷಗಳಲ್ಲಿನ ಹನ್ನೊಂದುವರೆ ವರ್ಷಗಳ ಕಾಲ ಚಿತ್ರಕೂಟದ ಕಣಿವೆಯಲ್ಲಿ ಕಳೆದರು ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರಕೂಟದಲ್ಲಿನ ಹಿಂದೂ ದೇವಾಲಯಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿವೆ.
ಅನೇಕ ಜನರು ಪ್ರತಿ ಅಮಾವಾಸ್ಯೆಯೂ ಇಲ್ಲಿ ಒಂದುಗೂಡುತ್ತಾರೆ. ಸೋಮವತಿ ಅಮಾವಾಸ್ಯೆ , ದೀಪಾವಳಿ, ಶರದ್-ಪೂರ್ಣಿಮ, ಮಕರ ಸಂಕ್ರಾಂತಿ ಮತ್ತು ರಾಮನವಮಿ ಇಂತಹ ವಿಶೇಷ ಸಂದರ್ಭಗಳಲ್ಲಿ ಚಿತ್ರಕೂಟದಲ್ಲಿನ ದೇವಾಲಯಗಳಲ್ಲಿ ವಿಶೇಷ ಆಚರಣೆಗಳು ನಡೆಯಲಿದ್ದು ಭಕ್ತಾದಿಗಳು ಸಹಸ್ರಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
2013ರ ಅ.13ರಂದೂ ಸಹ ಮಧ್ಯಪ್ರದೇಶದಲ್ಲಿ ಇಂತದ್ದೇ ಕಾಲ್ತುಳಿತ ಸಂಭವಿಸಿ 115ಕ್ಕೂ ಹೆಚ್ಚು ಜನ ಮೃತಪಟ್ಟು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.