ಬೆಂಗಳೂರು : ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವುದಿಲ್ಲ, ಪಕ್ಷದ ಅವನತಿಗೂ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಯಾವುದೇ ಸಂದರ್ಭದಲ್ಲಿಯೂ ಪಕ್ಷ ತೊರೆಯುವುದಿಲ್ಲ, ಜೆಡಿಎಸ್ ಪಕ್ಷವನ್ನು ಇತರ ಪಕ್ಷಗಳ ಜತೆ ವಿಲೀನವನ್ನೂ ಮಾಡುವುದಿಲ್ಲ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಂದು ಆವೇಷ ಭರಿತರಾಗಿ ಮಾತನಾಡಿದ್ದಾರೆ, ಯಾರೂ ಅನ್ಯತಾ ಭಾವಿಸಬಾರದು. ಕೆಲ ನಾಯಕರು ಪಕ್ಷ ರ್ತೊರೆಯುತ್ತಿರುವುದರಿದ ಅವರಿಗೆ ಬೇಸರವಿದೆ ಎಂದರು. ಜೆಡಿಎಸ್ ಪಕ್ಷವನ್ನು ತೊರೆಯುವವರು ಈಗಾಗಲೇ ಬಿಟ್ಟುಹೋಗಿದ್ದಾರೆ. ಇನ್ಯಾರೂ ಪಕ್ಷ ತೊರೆಯುವವರು ಇಲ್ಲ ಎಂದು ತಿಳಿಸಿದರು.
ಕಾರ್ಯಕರ್ತರ ದುಡಿಮೆಯೇ ಪಕ್ಷಕ್ಕೆ ಬಲ, ಶಕ್ತಿ. ರಾಜ್ಯದ ಮೂಲೆ ಮೂಲೆಗಳಲ್ಲೂ ಪಕ್ಷ ಸಂಘಟನೆ ಮಾಡುವ ಮೂಲಕ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೇವೇಗೌಡರ ಗರಡಿಯಲ್ಲಿ ಬೆಳೆದವರು. ಅವರು ಯಾವರೀತಿ ಆಡಳಿತ ನಡೆಸುತ್ತಾರೆ ಎಂಬುದನ್ನು ನೋಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ. ಕಾಲಪಕ್ವವಾಗಲು ಕಾಯುತ್ತಿದ್ದೇನೆ ಎಂದರು.
ಶಿಕಾರಿಪುರದಲ್ಲಿ ಜೆಡಿಎಸ್ ಕಾರ್ಯಕರ್ತರ ಮನೆಗಳಿಗೆ ತೆರಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿ, ಇಲ್ಲವಾದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಿ ಎಂದು ಸಿದ್ದರಾಮಯ್ಯ ಆಹ್ವಾನ ನೀಡುತ್ತಿದ್ದಾರೆ. ಕಾಂಗ್ರೆಸ್ ಗೆ ನಿಜವಾದ ಶಕ್ತಿಯಿದ್ದಿದ್ದರೆ ಇಂದು ಈ ರೀತಿ ಜೆಡಿಎಸ್ ಬೆಂಬಲ ಕೋರುತ್ತಿರಲಿಲ್ಲ. ಇನ್ನೊಂದೆಡೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಸಚಿವರು ಬಿಜೆಪಿ ಮುಖಂಡರ ಮನೆಗೆ ತೆರಳಿ ಕಾಂಗ್ರೆಸ್ ಗೆ ಬೆಂಬಲ ನೀಡುವಂತೆ ಕೇಳಿದ್ದಾರೆ. ಇಂದು ಕಾಂಗ್ರೆಸ್ ಗೆ ಎಂತಹ ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.