ಲಖ್ನೌ : ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಸದಸ್ಯರನ್ನೊಳಗೊಂಡ ಸಮಿತಿ ಉತ್ತರ ಪ್ರದೇಶ ಸರ್ಕಾರಕ್ಕೆ ಆ.17ರಂದು ವರದಿ ಸಲ್ಲಿಸಿದೆ.
ವರದಿಯಲ್ಲಿ, ಕೋಮುಗಲಭೆ ಸಂಭವಿಸುವುದಕ್ಕೆ ಸ್ಥಳೀಯ ಆಡಳಿತದ ವೈಫಲ್ಯವನ್ನೇ ಹೊಣೆ ಮಾಡಲಾಗಿದೆ. ಪ್ರಾರಂಭಿಕ ಹಂತದಲ್ಲೇ ಕೋಮುಗಲಭೆ ಹತ್ತಿಕ್ಕಲು ಜಿಲ್ಲಾಡಳಿತ ವೈಫಲ್ಯವಾಗಿದೆ ಎಂದು ಸಮಿತಿ ಸದಸ್ಯರು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಕೋಮುಗಲಭೆ ಸಂಭವಿಸಲು ಬಿಜೆಪಿ ಸಂಸದ ರಾಘವ್ ಲಖನ್ ಪಾಲ್, ಅವರು ಪ್ರಚೋದನೆ ನೀಡಿದ್ದಾರೆ ಎಂದೂ 5 ಸದಸ್ಯರನ್ನೊಳಗೊಂಡ ಸಮಿತಿ ಸರ್ಕಾರಕ್ಕೆ ತಿಳಿಸಿದೆ. ಕಳೆದ ತಿಂಗಳು ಸಂಭವಿಸಿದ್ದ ಕೋಮುಗಲಭೆಯಲ್ಲಿ ಉತ್ತರಪ್ರದೇಶ ಸರ್ಕಾರಕ್ಕೆ ಸುಮಾರು, 244 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ಸಮಿತಿ ಹೇಳಿದೆ.
ಜುಲೈ ನಲ್ಲಿ ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಗುಂಪು ಘರ್ಷಣೆ ಉಂಟಾಗಿತ್ತು. ಗಲಭೆ ನಿಯಂತ್ರಿಸಲು ರಬ್ಬರ್ ಬುಲೆಟ್ಗಳನ್ನು ಹಾರಿಸಲಾಗಿತ್ತು. ಗಲಭೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸಚಿವ ಶಿವಪಾಲ್ ಯಾದವ್ ನೇತೃತ್ವದಲ್ಲಿ ಉನ್ನತ ಮಟ್ಟದ ಆಡಳಿತಾತ್ಮಕ ಸಮಿತಿ ರಚಿಸಿದ್ದರು.