ಜಮ್ಮು-ಕಾಶ್ಮೀರ : ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜಮ್ಮು-ಕಾಶ್ಮೀರದ ಆರ್.ಎಸ್ ಪುರ ಸೆಕ್ಟರ್ ನಲ್ಲಿ ಏಳು ಜನ ಬಿ.ಎಸ್.ಎಫ್ ಯೋಧರ ಮೇಲೆ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದೆ.
ಆ.16ರ ಮಧ್ಯರಾತ್ರಿಯಿಂದ ಗಡಿ ಪ್ರದೇಶದಲ್ಲಿ ಆರಂಭವಾದ ಗುಂಡಿನ ದಾಳಿ ಆ.17ರ ಬೆಳಿಗ್ಗೆ ವರೆಗೂ ಮುಂದುವರೆದಿತ್ತು. ಪಾಕಿಸ್ತಾನದ ದಾಳಿಗೆ ಭಾರತದ ಯೋಧರು ಪ್ರತಿ ದಾಳಿ ನಡೆಸಿದ್ದಾರೆ.
ಪಾಕಿಸ್ತಾನದ ಜಮ್ಶೆಡ್ ಪ್ರದೇಶದ ರೇಂಜರ್ ಗಳು ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವುದರ ಹೊರತಾಗಿಯೂ ಪ್ರತಿ ದಿನ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವೂ ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಪಾಕ್ ದಾಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ನಡೆಸಿದ ದಾಳಿಯನ್ನೇ ಎನ್.ಡಿ.ಎ ಸರ್ಕಾರದ ಅವಧಿಯಲ್ಲೂ ಪಾಕಿಸ್ತಾನ ಮುಂದುವರೆಸುತ್ತಿದೆ.
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಜಮ್ಮು-ಕಾಶ್ಮೀರದ ವಿಷಯವಾಗಿ ಪಾಕಿಸ್ತಾನ ಮತ್ತೆ ಖ್ಯಾತೆ ತೆಗೆದಿತ್ತು. ಜಮ್ಮು-ಕಾಶ್ಮೀರದ ಮೇಲೆ ಹಕ್ಕು ಪ್ರತಿಪಾದನೆ ಮಾಡಲು ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನ ಕಾಶ್ಮೀರದ ಗಡಿಯಲ್ಲಿ ಪದೇ ಪದೇ ಕದನವಿರಾಮ ಉಲ್ಲಂಘನೆ ಮಾಡುತ್ತಿದೆ.