ಮೈಸೂರು : ಮೈಸೂರು ದಸರಾ ಮಹೋತ್ಸವದ ಕೇಂದ್ರಬಿಂದು ಗಜಪಡೆ ಪಯಣಕ್ಕೆ ಆ.14ರಂದು ಚಾಲನೆ ನೀಡಲಾಗಿದ್ದು ದಸರಾ ಗಜಪಡೆ ಮೈಸೂರಿನತ್ತ ಪ್ರಯಾಣ ಬೆಳೆಸಿವೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್, ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಹುಣಸೂರು ತಾಲೂಕಿನ ನಾಗಾಪುರದ ಗಿರಿಜನ ಪುನರ್ವಸತಿ ಕೇಂದ್ರ ಶಾಲೆ ಆವರಣದಿಂದ ಗಜಪಯಣಕ್ಕೆ ಚಾಲನೆ ನೀಡಿದರು.
ಬಲರಾಮ, ಅಭಿಮನ್ಯು, ಮೇರಿ, ವರಲಕ್ಷ್ಮಿ, ಅಂಬಾರಿ ಹೊರುವ ಅರ್ಜುನ ಮತ್ತು ಚಾಮರಾಜನಗರದಿಂದ ಆನೆ ಗಜೇಂದ್ರ ಅಶೋಕಪುರಂನ ಅರಣ್ಯ ಭವನಕ್ಕೆ ಆಗಮಿಸಲಿವೆ.
ಪ್ರತಿ ಬಾರಿ ಅರಮನೆ ಮುಂಭಾಗದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತಿತ್ತು. ಆದರೆ ಮೈಸೂರು ಅರಸ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ನಿಧನರಾಗಿ ಒಂದು ವರ್ಷ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅಶೋಕಪುರಂನ ಅರಣ್ಯ ಕಚೇರಿ ಬಳಿ ಆನೆಗಳನ್ನು ಸ್ವಾಗತಿಸಲಾಗುತ್ತದೆ.
ಅರಮನೆ ಮುಂಭಾಗದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ನೀಡದೇ ಇರುವ ನಿರ್ಧಾರಕ್ಕೆ ಮೈಸೂರು ಮಾಜಿ ಸಂಸದ ಹೆಚ್.ವಿಶ್ವನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವರಿ ಸಚಿವ ಶ್ರೀನಿವಾಸ್ ಪ್ರಸಾದ್, ವಿಶ್ವನಾಥ್, ಪ್ರಚಾರಕ್ಕಾಗಿ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಎಂದು ಹೇಳಿದ್ದಾರೆ.