ಹುಬ್ಬಳ್ಳಿ : ಮಂಗಳೂರು ಇನ್ಫೋಸಿಸ್ ಕಛೇರಿ ಸ್ಫೋಟಿಸಿ ವಿಧ್ವಂಸಕ ಕೃತ್ಯ ನಡೆಸಲು ಸಿಮಿ ಭಯೋತ್ಪಾದಕ ಸಂಘಟನೆ ಸಂಚು ರೂಪಿಸಿತ್ತು.
ಅಲ್ಲದೇ ಗೋವಾದ ಪ್ರಮುಖ ಬೀಚ್ ಗಳಲ್ಲಿ ಬಾಂಬ್ ಸ್ಪೋಟಿಸಿ, ವಿದೇಶಿಯರನ್ನು ಅದರಲ್ಲೂ ವಿಶೇಷವಾಗಿ ಇಸ್ರೇಲ್ ಪ್ರಜೆಗಳನ್ನು ಹತ್ಯೆ ಮಾಡಲು ಯೋಜಿಸಿತ್ತು ಎಂಬ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ.
ರಾಷ್ಟ್ರದ್ರೋಹದ ಆಪಾದನೆ ಮೇಲೆ ಬಂಧಿತರಾಗಿರುವ ಸಿಮಿ ಸಂಘಟನೆಯ ಕಾರ್ಯಕರ್ತರಾದ ಅಸಾದುಲ್ಲಾ ಹಾಗೂ ಮಹಮ್ಮದ ಗೌಸ್ ಉರ್ಫ್ ರಜಾವುದ್ದೀನ್ ನಾಸಿರ್ ತನಿಖೆ ವೇಳೆ ಈ ಕುರಿತು ಹೇಳಿಕೆ ನೀಡಿದ್ದಾರೆ.
ನಗರದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಕಳೆದ 7 ದಿನಗಳಿಂದ ಬಂಧಿತರ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಮಾಹಿತಿ ಬಹಿರಂಗವಾಗಿದೆ.
ಮಂಗಳೂರಿನಲ್ಲಿರುವ ಇನ್ಫೋಸಿಸ್ ಗೆ ಮೂರು ಗೇಟ್ ಗಳಿದ್ದು, ಅದರಲ್ಲಿ ದಕ್ಷಿಣ ಭಾಗದಲ್ಲಿರುವ ಗೇಟ್ ಮೂಲಕ ಒಳ ಪ್ರವೇಶಿಸಿ ಸ್ಫೋಟ ನಡೆಸಲು ಅಸಾದುಲ್ಲಾ ಹಾಗೂ ನಾಸಿರ್ ಯೋಜನೆ ರೂಪಿದ್ದರು. ಇದಕ್ಕಾಗಿ ಮಂಗಳೂರಿಗೆ ಬಂದಿಳಿದ ಆರೋಪಿಗಳು ನಗರದ ತೋಪಾಜ್ ಲಾಡ್ಜ್ ನಲ್ಲಿ ತಂಗಿದ್ದರು. ಈ ವೇಳೆ ಮಂಗಳೂರು ಪಾಲಿಕೆ ಮೈದಾನದಲ್ಲಿ ಕರಾವಳಿ ಉತ್ಸವ ನಡೆಯುತ್ತಿದ್ದು, ಈ ವೇಳೆ ಬೈಕ್ ಕಳ್ಳತನಕ್ಕೆ ಯತ್ನಿಸಿದ್ದರು. ಆದರೆ ಜನಜಂಗುಳಿಯಿದ್ದ ಹಿನ್ನಲೆಯಲ್ಲಿ ಬೈಕ್ ಕಳ್ಳತನ ಮಾಡಲಾಗಲಿಲ್ಲ. ನಂತರ ಇನ್ಫೋಸಿಸ್ ಕಛೇರಿಗೆ ಬಂದು ದಕ್ಷಿಣ ಭಾಗದ ಗೇಟ್ ನಿಂದ ಒಳಪ್ರವೇಶಿಸಲು ಯತ್ನಿಸಿದರು. ಆದರೆ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದರಿಂದ ಯೋಜನೆ ವಿಫಲವಾಗಿದೆ.
ಬಳಿಕ ಅಲ್ಲಿಂದ ಹೊಸೂರು ಮೂಲಕ ಆಗುಂಬೆ ದರ್ಗಾದಲ್ಲಿ ವಾಸ್ತವ್ಯ ಮಾಡಿದ್ದಾರೆ. ಮೌಲ್ವಿಯೊಬ್ಬರನ್ನು ಭೇಟಿಯಾದ ಬಳಿಕ ಹುಬ್ಬಳಿಗೆ ಆಗಮಿಸಿ, ಸಿಬಿಟಿ ಬಳಿಯ ಬಾಡಿಗೆ ಮನೆಯಲ್ಲಿ ತಂಗಿದ್ದರು ಎಂಬ ಸಂಗತಿ ಬಯಲಾಗಿದೆ.