ಮುಂಬೈ : ಮುಂಬೈ-ಗೋವಾ ಹೆದ್ದಾರಿಯಲ್ಲಿನ ಬ್ರಿಟಿಷ್ ಕಾಲದಲ್ಲಿ ನಿರ್ವಿುಸಲಾಗಿದ್ದ ಹಳೇ ಸೇತುವೆ ಸಾವಿತ್ರಿ ನದಿಯ ಪ್ರವಾಹಕ್ಕೆ ಸಿಲುಕಿ ಕುಸಿದು ಕೊಚ್ಚಿ ಹೋದ ಬಸ್, ಕಾರು, ಜನರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಎನ್ಡಿಆರ್ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ಪಡೆಯೊಂದಿಗೆ ಸ್ಥಳೀಯ ಈಜುಗಾರರು ಕೂಡಾ ಶೋಧ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಈ ವರೆಗೆ14 ಶವಗಳನ್ನು ರಕ್ಷಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಇದರಲ್ಲಿ 3 ಮಹಿಳೆ ಹಾಗೂ 11 ಪುರುಷರ ಮೃತದೇಹ ಪತ್ತೆಯಾಗಿದೆ. ಇನ್ನುಳಿದಂತೆ ನಾಪತ್ತೆಯಾದವರಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ.
ಮುಂಬೈನಿಂದ ಸುಮಾರು 84 ಕಿ.ಮೀ ದೂರದಲ್ಲಿರುವ ರಾಯಗಡ ಜಿಲ್ಲೆಯ ಸಮೀಪದಲ್ಲಿರುವ ಬ್ರಿಟೀಷ್ ಕಾಲದ ಮೇಲ್ಸೇತುವೆ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಕುಸಿದುಬಿದ್ದಿತ್ತು. ಈ ವೇಳೆ ಸೇತುವೆ ಚಲಿಸುತ್ತಿದ್ದ ಎರಡು ಬಸ್ ಹಾಗೂ 4 ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಪ್ರಾಥಮಿಕ ಮಾಹಿತಿ ಪ್ರಕಾರ ಈ 6 ವಾಹನಗಳಲ್ಲಿ ಒಟ್ಟು 42 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕೊಚ್ಚಿ ಹೋಗಿರುವ ಎರಡು ಬಸ್ ಮತ್ತು ಮೂರು ಕಾರುಗಳ ಅವಶೇಷ ಪತ್ತೆಗಾಗಿ ಅಧಿಕಾರಿಗಳು ಕ್ರೇನ್ ಸಹಾಯದಿಂದ 300 ಕೆಜಿ ತೂಕದ ಬೃಹತ್ ಅಯಸ್ಕಾಂತವನ್ನು ನದಿಯಲ್ಲಿ ಇಳಿಬಿಟ್ಟಿದ್ದಾರೆ. 40 ಅಡಿ ನದಿಯ ಆಳಕ್ಕೆ ರೋಪ್ ಮೂಲಕ ಮ್ಯಾಗ್ನೆಟ್ ಇಳಿಸಲಾಗಿದ್ದು, ಕಬ್ಬಿಣವನ್ನು ಆಕರ್ಷಿಸುವುದರಿಂದ ಬಸ್ ಮತ್ತು ಇತರ ವಾಹನಗಳ ಪತ್ತೆಕಾರ್ಯ ಸುಲಭವಾಗುವ ಸಾಧ್ಯತೆಯಿದೆ. ಮ್ಯಾಗ್ನೆಟ್ಗೆ ವಸ್ತುವೊಂದು ತಾಗಿದೆ. ಆದರೆ ಸಾವಿತ್ರಿ ನದಿಯ ಪ್ರವಾಹ ಮುಂದುವರಿದಿದ ಹಿನ್ನೆಲೆಯಲ್ಲಿ ಅದನ್ನು ಮೇಲಕ್ಕೆಳೆಯಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ದುರಂತ ಸಂಭವಿಸಿದ್ದ ಸ್ಥಳಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಭೇಟಿ ನೀಡಿ ಪರಿಶೀಲಿಸಿದ್ದು, ಗೋವಾ-ಮುಂಬೈ ಹೆದ್ದಾರಿಯ ತುರ್ತು ದುರಸ್ಥಿಗೆ ಆದೇಶಿಸಿದ್ದಾರೆ.