ಬೆಂಗಳೂರು : ಆಫ್ರಿಕಾ ಖಂಡದಲ್ಲಿ ಕಾಣಿಸಿಕೊಂಡಿರುವ ಎಬೋಲ ರೋಗವು ತೀವ್ರತರವಾದ ಸೋಂಕಿನಿಂದ ಕೂಡಿದ ಮತ್ತು ಮಾರಣಾಂತಿಕ ರೋಗವಾಗಿದೆ. ಈ ರೋಗವು ನಮ್ಮ ರಾಜ್ಯಕ್ಕೆ ಬಾರದಂತೆ ತಡೆಯಲು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರ ಸಲಹೆ ಸೂಚನೆ ಮೆರೆಗೆ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ವಿಶೇಷ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗಿದೆ.
ಆಫ್ರಿಕಾ ಖಂಡದ ದೇಶಗಳಾದ ಗಿನಿಯಾ, ಲೈಬಿರಿಯಾ, ಸಿಯೆರಾ, ಲಿಯೋನ್, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಿಂದ ವಿಮಾನಗಳಲ್ಲಿ ಬರುವ ಪ್ರಯಾಣಿಕರಿಂದ ಈ ರೋಗವು ಹರಡುವ ಸಾಧ್ಯತೆಯಿರುವುದರಿಂದ ಭಾರತ ಸರ್ಕಾರದ ಮಾರ್ಗಸೂಚಿಯಂತೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ರವರ ನಿರ್ದೇಶನದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ಹೊರ ದೇಶಗಳಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ವಿಶೇಷ ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ.
ಈ ರೋಗವು ರೋಗ ಪೀಡಿತ ಮನುಷ್ಯರ ರಕ್ತ, ಬೆವರು, ವೀರ್ಯ, ವಾಂತಿ, ಮೂತ್ರ, ಉಗುಳು ಮುಂತಾದುವುಗಳ ಸಂಪರ್ಕದಿಂದ ಹರಡಲಿದೆ. ಈ ರೋಗದ ಲಕ್ಷಣಗಳು ಜ್ವರ, ತಲೆನೋವು, ಸುಸ್ತು, ಭೇದಿ, ವಾಂತಿ, ಹೊಟ್ಟೆನೋವು, ಕೀಲುನೋವು, ರಕ್ತಸ್ರಾವ ಮುಂತಾದ ತೊಂದರೆಗಳು ಕಂಡುಬರುತ್ತವೆ. ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ವ್ಯವಸ್ಥೆಗೊಳಿಸಿರುವ ತಪಾಸಣಾ ಕೇಂದ್ರಗಳಲ್ಲಿ ಪರೀಕ್ಷಿಸಿಕೊಳ್ಳಬಹುದು ಹಾಗೂ ಹೆಚ್ಚಿನ ಚಿಕಿತ್ಸೆ ಅಗತ್ಯವಾದಲ್ಲಿ ಈಗಾಗಲೇ ರಾಜೀವ್ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 15 ಹಾಸಿಗೆಗಳ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ.
ಈ ರೋಗವನ್ನು ಖಚಿತಪಡಿಸಿಕೊಳ್ಳಲು ಪೂನಾದಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ರಕ್ತದ ಮಾದರಿಯನ್ನು ಪರೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯಕ್ಕೆ ಈ ರೋಗ ಬರುವುದು ಕ್ಷೀಣವಾಗಿದ್ದರೂ ಸಹ ಆರೋಗ್ಯ ಇಲಾಖೆಯು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ನಿರ್ದೇಶಕಿ ಡಾ|| ಗೀತಾ ನ್ಯಾಮಗೌಡರ್ ತಿಳಿಸಿದ್ದಾರೆ.