ಶ್ರೀನಗರ : ಭಾರತಕ್ಕೆ ನುಸುಳಿದೆ ಪಾಕಿಸ್ತಾನದ ಇನ್ನೊಬ್ಬ ಉಗ್ರನನ್ನು ಭಾರತೀಯ ಸೇನ ಬಂಧಿಸಿದೆ. ಇವನ ಸಹಚರರಾದ ಉಳಿದ ನಾಲ್ವರು ಉಗ್ರರು ರಕ್ಷಣಾ ದಳದ ವಿರುದ್ಧ ನಡೆದ ಗುಂಡಿನ ದಾಳಿಯಲ್ಲಿ ಸತ್ತಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲದಲ್ಲಿ 20 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಪಾಕ್ ಉಗ್ರರು ಬಲಿಯಾಗಿದ್ದಾರೆ.
ಕಾಶ್ಮೀರದ ಸೋಪೋರ್ ಜಿಲ್ಲೆಯ ಉರಿ ವಿಭಾಗದ ರಫಿಯಾಬಾದ್ ನಲ್ಲಿ ಉಗ್ರ ಸಜ್ಜದ್ ಅಹ್ಮೆದ್ ಬಂಧಿತನಾಗಿದ್ದಾನೆ. ರಕ್ಷಣಾ ದಳದ ಅಧಿಕಾರಿಗಳು ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇವನ ಗುಪ್ತ ಹೆಸರು ಅಬು ಉಬೇದುಲ್ಲ ಎಂದು ತಿಳಿದು ಬಂದಿದೆ.
ಆಗಸ್ಟ್ 5ರಂದು ಉಧಾಂಪುರದಲ್ಲಿ ಬಂಧಿತನಾದ ಪಾಕ್ ಉಗ್ರ ನಾವೆದ್ ಯಾಕೂಬ್ ನಂತರ ಇಂದು ಎರಡನೇ ಪಾಕ್ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.
ಬಂಧಿತ ಉಗ್ರನನ್ನು ಸಜ್ಜದ್ ಅಹ್ಮೆದ್ ಎಂದು ಗುರಿತಿಸಲಾಗಿದ್ದು, ಇವನು ಪಾಕಿಸ್ತಾನದ ಮುಜ್ಹಫ್ಫರ್ ಘರ್ ನಿವಾಸಿ ಎಂದು ತಿಳಿದು ಬಂದಿದೆ.
ಐವರು ಉಗ್ರರನ್ನು ಮೊದಲು ಉರಿ ಎಂಬಲ್ಲಿ ಭಾರತೀಯ ರಕ್ಷಣಾ ದಳ ಪತ್ತೆಹಚ್ಚಿತ್ತು. ಆದರೆ ಅವರು ಅಲ್ಲಿಂದ ತಪ್ಪಿಸಿಕೊಂಡಿದ್ದರು. ನಂತರ ಬುಧವಾರ ಸಂಜೆ, ನಿಯಂತ್ರಣಾ ರೇಖೆಯಿಂದ 18ಕಿ.ಮಿ ದೂರದಲ್ಲಿ ಗುಹೆಯೊಂದರಲ್ಲಿ ಅಡಗಿದ್ದ ಉಗ್ರರನ್ನು ಸೇನೆ ಗುರುತಿಸಿತು.
ಆಗ ನಡೆದ ಗುಂಡಿನ ಕಾಳಗದಲ್ಲಿ ಒಬ್ಬ ಉಗ್ರ ನಿನ್ನೆ ಹತ್ಯೆಯಾಗಿದ್ದು, ಉಳಿದ ಮೂವರು ಇಂದು ಹತರಾದರು. ಈ ಪ್ರದೇಶ ಶ್ರೀನಗರದಿಂದ 70ಕಿ.ಮಿ ದೂರದಲ್ಲಿದೆ.
ಕಳೆದ ಒಂದು ತಿಂಗಳಲ್ಲಿ ಇದು ಎರಡನೇ ಬಾರಿ ಪಾಕಿಸ್ತಾನದ ಉಗ್ರನನ್ನು ಸೆರೆಹಿಡಿಯಲಾಗಿದೆ.
ಈ ಪ್ರದೇಶದಲ್ಲಿ ಇನ್ನಷ್ಟು ಉಗ್ರರ ಶೋಧನೆಗಾಗಿ ಸೇನಾ ಕಾರ್ಯಾಚರಣೆ ಮುಂದುವರಿದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.