ನವದೆಹಲಿ : ಐಸಿಸ್ ಉಗ್ರರ ಕಣ್ಣು ಈಗ ಭಾರತದತ್ತ ಬಿದ್ದಿದ್ದು, ದೇಶಾದ್ಯಂತ ಭಯೋತ್ಪಾದಕ ದಾಳಿಗಳ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಮುಂಬೈ, ದೆಹಲಿ, ಚೆನ್ನೈ, ಹೈದ್ರಾಬಾದ್, ಕೋಲ್ಕತ್ತಾ ಹಾಗೂ ಅಹ್ಮದಾಬಾದ್ ಸೇರಿದಂತೆ ಮಹಾನಗರಗಳಲ್ಲಿ ಬಿಗಿ ಭದ್ರತೆ ಘೋಷಿಸಲಾಗಿದೆ.
ಭಾರತದಲ್ಲಿರುವ ಐಸಿಸ್ ಉಗ್ರರ ಬೆಂಬಲಿಗರು ಇಲ್ಲಿನ ಟರ್ಕಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಯಾವುದೇ ಕ್ಷಣ, ಯಾವುದೇ ಸ್ಥಳದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದು, ದೇಶದ ಪ್ರಮುಖ ಸ್ಥಳಗಳ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಸ್ಟಾರ್ ಹೊಟೇಲ್ ಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದೇಶದ ಅಲ್ಪಸಂಖ್ಯಾತ ಸಮುದಾಯದ ಹಲವಾರು ಯುವಕರಿಗೆ ಐಸಿಸ್ ಉಗ್ರ ಸಂಘಟನೆಯಿಂದ ಭಾರೀ ಆಮಿಷಗಳು ಬರುತ್ತಿದ್ದು, ಅವರನ್ನೆಲ್ಲ ಸಂಘಟನೆಗೆ ಸೇರುವಂತೆ ಉತ್ತೇಜಿಸಲಾಗುತ್ತಿದೆ. ಮುಂಬೈನ ಕಲ್ಯಾಣ್ ಪ್ರದೇಶದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಇತರ 7 ಮಂದಿ ಭಾರತೀಯ ಯುಕರು ಈಗಾಗಲೇ ಐಸಿಸ್ ಸಂಘಟನೆಯಲ್ಲಿ ಗುರುತಿಸಿಕೊಂಡು ವಿವಿಧೆಡೆ ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲದೇ ಮುಂಬೈಯ ಕಲ್ಯಾಣ್ ನಿಂದ ಸಿರಿಯಾಕ್ಕೆ ತೆರಳಿದ್ದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೈಕಿ ಆರೀಬ್ ಮಜೀದ್ ಎಂಬ ಯುವಕ ಅಲ್ಲಿಂದ ಮುಂಬೈಗೆ ಹಿಂದಿರುಗಿದ್ದು ಸಧ್ಯ ಪೊಲೀಸರ ವಶದಲ್ಲಿದ್ದಾನೆ. ರಾಷ್ಟ್ರೀಯ ತನಿಖಾ ದಳ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಈ ತನಿಖೆಯಿಂದ ಹೊರಬಂದಿರುವ ಹಾಗೂ ಹೊರಬರುವ ಮಾಹಿತಿಗಳನ್ ನಾಧರಿಸಿ ಗುಪ್ತಚರ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ.