ಶ್ರೀನಗರ : ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿ ಕೆಲ ದಿನಗಳ ಹಿಂದೆ ಬಿಎಸ್ಎನ್ಎಲ್ ಕಚೇರಿಗೆ ನುಗ್ಗ ಓರ್ವ ಉದ್ಯೋಗಿ ಹಾಗೂ ಓರ್ವ ನಾಗರಿಕನನ್ನು ಸಾಯಿಸಿದ ಉಗ್ರ ಸಂಘಟನೆ ಲಷ್ಕರ್-ಎ-ಇಸ್ಲಾಮ್ ಎಂದು ಪೊಲೀಸರು ಗುರುತಿಸಿದ್ದಾರೆ. ಇದು ಕಾಶ್ಮೀರದಲ್ಲಿ ಹುಟ್ಟಿರುವ ಹೊಸ ಉಗ್ರ ಸಂಘಟನೆಯಾಗಿದ್ದು, ಮೊಬೈಲ್ ಟವರ್ ಗಳನ್ನು ನಾಶ ಮಾಡುವುದೇ ಇದರ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಸೊಪೋರ್ ನಲ್ಲಿ ಹತ್ಯೆಯಾದ ನಾಗರಿಕ ಉಗ್ರ ಬೆದರಿಕೆಗೆ ಜಗ್ಗದೆ ತನ್ನ ಜಮೀನಿನಲ್ಲಿ ಮೊಬೈಲ್ ಟವರ್ ನಿರ್ಮಿಸಲು ಅವಕಾಶ ಕೊಟ್ಟಿದ್ದರು. ಇದಕ್ಕಾಗಿ ಅವರು ತನ್ನ ಪ್ರಾಣವನ್ನೇ ಬಲಿಕೊಡಬೇಕಾಯಿತು.
ಕೇಂದ್ರದಲ್ಲಿ ಸರ್ಕಾರ ಬದಲಾದ ಬಳಿಕ ಕಾಶ್ಮೀರದಲ್ಲಿ ಉಗ್ರರ ದಮನ ಚಟುವಟಿಕೆ ತೀವ್ರಗೊಂಡಿದೆ. ಆದರೆ ಉಗ್ರರ ಸದ್ದಡಗಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಹೆಚ್ಚಾಗಿ ಉಗ್ರರ ಸುಳಿವು ನೀಡುವುದು ಅವರ ಮೊಬೈಲ್ ನಂಬರ್ ಗಳು. ಮೊಬೈಲ್ ನಂಬರ್ ಗೊತ್ತಿದ್ದರೆ ಆ ವ್ಯಕ್ತಿ ಯಾವ ಪ್ರದೇಶದಲ್ಲಿದ್ದಾನೆಂದು ಮೊಬೈಲ್ ಟವರ್ ಸಿಗ್ನಲ್ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಜಿಪಿಎಸ್ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಅನೇಕ ಉಗ್ರರ ಹೆಜ್ಜೆಗುರುತು ಪತ್ತೆಹಚ್ಚುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.
ಮೊಬೈಲ್ ಟವರ್ ಮೇಲೆ ಉಗ್ರರು ಸಿಟ್ಟುಗೊಳ್ಳಲು ಇದು ಕಾರಣ. ಹೀಗಾಗಿ ಮೊಬೈಲ್ ಟವರ್ಗಳನ್ನು ನಾಶ ಮಾಡುವ ಉದ್ದೇಶದಿಂದ ಲಷ್ಕರ್-ಎ-ಇಸ್ಲಾಮ್ ಹುಟ್ಟಿಕೊಂಡಿದೆ. ಇದು ಲಷ್ಕರ್-ಎ-ತೊಯ್ಬಾ ಅಥವಾ ಹಿಜ್ಬುಲ್ ಮುಜಾಹಿದಿನ್ ಕೂಸಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸೊಪೋರ್ ನಲ್ಲಿ ಮತ್ತು ಕಾಶ್ಮೀರದಲ್ಲಿ ಮೊಬೈಲ್ ಫೋನ್ ಜಾಲವನ್ನು ನಾಶ ಮಾಡುವ ಉದ್ದೇಶದಿಂದ ಹೊಸ ಸಂಘಟನೆಯನ್ನು ರಚಿಸಿರುವುದನ್ನು ಸೊಪೋರ್ ಎಸ್ಪಿ ಅಬ್ದುಲ್ ಖಯೂಮ್ ದೃಢಪಡಿಸಿದ್ದಾರೆ.