ಶ್ರೀನಗರ : ಕಳೆದ ತಿಂಗಳಲ್ಲಿ ಜಮ್ಮು-ಕಾಶ್ಮೀರದ ಸಾಂಬಾ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಆರು ತಾಸುಗಳ ಶೂಟೌಟ್ ನಲ್ಲಿ ಕೊನೆಗೂ ಭಾರತೀಯ ಸೈನಿಕರಿಂದ ಹತರಾಗಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರಲ್ಲಿ ಒಬ್ಬನು ಸತ್ತು ಬಿದ್ದಲ್ಲಿಯೇ ಸನಿಹದಲ್ಲೇ ಕಂಡು ಬಂದ ಒಂದು ಚೀಟಿಯಲ್ಲಿ ಮುಂದಿನ ಬಾರಿ ನಾವು ದೆಹಲಿಯಲ್ಲಿ ಭೇಟಿಯಾಗೋಣ' ಎಂಬ ಎಚ್ಚರಿಕೆ ಬರೆದಿದ್ದುದನ್ನು ಗಮನಿಸಿ ದೆಹಯಲ್ಲೀಗ ಸಂಭವನೀಯ ಆತ್ಮಾಹುತಿ ದಾಳಿಯ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.
ಪಾಕ್ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ, ನಕಲಿ ಸೇನಾ ಸಮವಸ್ತ್ರದಲ್ಲಿದ್ದ, ಉಗ್ರರಿಬ್ಬರು ಕಳೆದ ತಿಂಗಳಲ್ಲಿ ಜಮ್ಮು-ಕಾಶ್ಮೀರದಿಂದ ಕೇವಲ 40 ಕಿ.ಮೀ ದೂರದಲ್ಲಿರುವ ಹಾಗೂ ಪಾಕ್ ಗಡಿಯಿಂದ ಕೇವಲ 20 ಕಿ.ಮೀ. ದೂರದಲ್ಲಿರುವ ಸಾಂಬಾದಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಕೊನೆಗೂ ಹತರಾಗಿದ್ದರು.
ಹಾಗೆ ಹತರಾದ ಉಗ್ರರಲ್ಲಿ ಒಬ್ಬನ ಬಳಿ 'ಈ ದಾಳಿಗಾಗಿ ತಮ್ಮ ಜೀವವನ್ನು ಅರ್ಪಿಸಿ ಹುತಾತ್ಮರಾದವರಿಗೆ ನಮ್ಮ ಸಲಾಂ. ಮುಂದಿನ ಬಾರಿ ನಾವು ದೆಹಲಿಯಲ್ಲಿ ಭೇಟಿಯಾಗೋಣ' ಎಂಬ ಚೀಟಿಯೊಂದು ಸೈನಿಕರಿಗೆ ದೊರಕಿತ್ತು.
ಜೈಶ್ ಉಗ್ರರು ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿನ ಪೊಲೀಸ್ ಠಾಣೆಯ ಮೇಲೆ ನಡೆಸಿದ್ದ ಈ ದಾಳಿಯಲ್ಲಿ ಮೂವರು ಭದ್ರತಾ ಸಿಬಂದಿ ಹಾಗೂ ಇಬ್ಬರು ನಾಗರಿಕರು ಕೊಲ್ಲಲ್ಪಟ್ಟು ಇತರ 11 ಮಂದಿ ಗಾಯಗೊಂಡಿದ್ದರು.
ಈ ಚೀಟಿಯನ್ನು ಆಧರಿಸಿ ಮಾಹಿತಿ ಕಲೆ ಹಾಕಿರುವ ಗುಪ್ತಚರ ದಳ, ಎಪ್ರಿಲ್ ನಲ್ಲಿ ದೆಹಲಿಯಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರರು ಆತ್ಮಾಹುತಿ ದಾಳಿ ನಡೆಸುವ ಸುಳಿವನ್ನು ಕಂಡು ಕೊಂಡಿತ್ತು. ಈ ನಿತಿನಲ್ಲಿ ಕಟ್ಟೆಚ್ಚರ ಹಾಕಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.