ಲಕ್ನೋ : ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರಿಂದಾಗಿ ದೇಶವು ಈಗ ವಿಭಜನೆಯ ಅಂಚಿನಲ್ಲಿದೆ; ಆರ್.ಎಸ್.ಎಸ್ ಪ್ರೇರಿತ ಕೋಮು ಹಿಂಸೆ, ದಂಗೆ, ದೊಂಬಿ ನೆಡದಾಗಲೆಲ್ಲ ದೇಶದಲ್ಲಿ ಮುಸ್ಲಿಮರ ಮಾರಣ ಹೋಮ ನಡೆದಿದೆ ಎಂದು ಭಾರತದಲ್ಲಿನ ಬೃಹತ್ ಮುಸ್ಲಿಂ ಸಂಘಟನೆಗಳಲ್ಲಿ ಒಂದಾಗಿರುವ ಜಮೀಯತ್ ಉಲೇಮಾ-ಇ-ಹಿಂದ್ (ಜೆಯುಎಚ್) ಹೇಳಿದೆ.
ಬಿಜೆಪಿ ಮತ್ತು ಆರ್.ಎಸ್.ಎಸ್ ನಾಯಕರು ಮುಸ್ಲಿಂ ಸಮುದಾಯದವರ ಮನಸ್ಸಿನಲ್ಲಿ ಭೀತಿ ಸೃಷ್ಟಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಪ್ರಧಾನಿಯವರು ಆರ್.ಎಸ್.ಎಸ್ ಒತ್ತಡದಿಂದಾಗಿ ಮೌನಿಯಾಗಿದ್ದಾರೆ. ನಾವು ಕಳೆದ 70 ವರ್ಷಗಳಿಂದ ಸಂಘವನ್ನು (ಆರ್.ಎಸ್.ಎಸ್) ಗಮನಿಸುತ್ತಿದ್ದೇವೆ ಮತ್ತು ಅದರ ನಿಜವಾದ ಅಜೆಂಡಾ ಏನೆಂಬುದನ್ನು ತಿಳಿದಿದ್ದೇವೆ. ಅಪರೂಪಕ್ಕೊಮ್ಮೆ ಅವರು ನೀಡುವ ಸಹಾನುಭೂತಿಯ ಹೇಳಿಕೆಗಳಿಂದ ನಮ್ಮನ್ನು ಅವರು ದಾರಿ ತಪ್ಪಿಸಲಾರರು ಎಂದು ಜೆಯುಎಚ್ ಅಧ್ಯಕ್ಷ ಅರ್ಷದ್ ಮದನಿ ಅವರು ಸಹಾರಣ್ ಪುರದ ದೇವಬಂದ್ ನಲ್ಲಿ ನೀಡಿರುವ ಹೇಳಿಕೆಯನ್ನು ಉಲ್ಲೇಖೀಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಈ ವ್ಯಕ್ತಿಗಳನ್ನು ತಡೆಯದೇ ಹೋದರೆ ದೇಶವು ಮತ್ತೂಮ್ಮೆ ವಿಭಜನೆಯಾಗುವುದು ನಿಶ್ಚಿತ ಎಂದವರು ಹೇಳಿದ್ದಾರೆ.
ಆರ್.ಎಸ್.ಎಸ್ ಮುಸ್ಲಿಮರಿಗೆ ಮಾತ್ರವಲ್ಲ ಹಿಂದೂಗಳಿಗೆ ಮಾರಕಪ್ರಾಯವಾಗಿದೆ. ಇದೇ ಕೋಮು ಶಕ್ತಿಯಿಂದಾಗಿ ದೇಶವು ಹಿಂದೆ ವಿಭಜನೆಗೊಂಡಿತ್ತು. ಈ ಶಕ್ತಿಯನ್ನು ತಡೆಯದೇ ಹೋದರೆ ದೇಶವು ಮತ್ತೆ ಹೋಳಾಗುವುದು ನಿಶ್ಚಿತ. ಇಡಿಯ ದೇಶವನ್ನು ಕೋಮು ನೆಲೆಯಲ್ಲಿ ವಿಭಜಿಸುವುದೇ ಈ ಶಕ್ತಿಗಳ ಅಜೆಂಡಾ ಆಗಿದೆ ಎಂದವರು ಹೇಳಿದರು.
ಮುಸ್ಲಿಂ ವಿರೋಧಿ ಆರ್.ಎಸ್.ಎಸ್ ಮತ್ತು ಇತರ ಶಕ್ತಿಗಳನ್ನು ನಿಯಂತ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದನಿ ಆಗ್ರಹಿಸಿದರು. ಈ ಶಕ್ತಿಗಳ ವಿರುದ್ಧ ಕಠಿನ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.