ಕೋಲಾರ : ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಅವರ ನಿಗೂಢ ಸಾವು ರಾಜ್ಯ ಸರ್ಕಾರದ ವಿರುದ್ಧ ಚಳುವಳಿಯನ್ನೇ ಸೃಷ್ಟಿಸಿದೆ. ರವಿ ಅವರ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂಬ ಒತ್ತಾಯ ಒಂದೆಡೆಯಾದರೆ, ಐ.ಎ.ಎಸ್ ಅಧಿಕಾರಿಯ ಅಭಿಮಾನಿಗಳ ಆಕ್ರೋಶ ಮತ್ತೊಂದೆಡೆ.
ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದೆ ಅಭಿಮಾನಿಯೊಬ್ಬ ಆತ್ಮಹತ್ಯೆಗೂ ಶರಣಾಗಿದ್ದಾನೆ. ಈ ದುರ್ಘಟನೆ ತಾಲ್ಲೂಕಿನ ಮುಳಬಾಗಿಲು ತಾಲೂಕಿನ ತಿರುಮನಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಗೋಪಾಲ್(40)ಎಂದು ಗುರುತಿಸಲಾಗಿದೆ. ನಿನ್ನೆ ರವಿ ಅವರ ಸಾವಿನ ಸುದ್ದಿ ತಿಳಿದು ತೀವ್ರ ಹತಾಶೆಗೊಂಡಿದ್ದ ಅವರು, ಇಂದು ಬೆಳಗ್ಗೆ ಮುಳಬಾಗಿಲಿಗೆ ಹೋಗಿ ರವಿ ಅವರ ಭಾವಚಿತ್ರದ ಪ್ಲೆಕ್ಸ್ ತಂದು ಗ್ರಾಮದಲ್ಲಿ ಹಾಕಿ ಅದಕ್ಕೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಂತರ ಪತ್ನಿ, ಮಕ್ಕಳು ಹೊರ ಹೋಗಿದ್ದಾಗ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು, ಸರ್ಕಾರ ಘಟನೆಗೆ ಸಂಬಂಧಿಸಿದಂತೆ ಕೂಡಲೇ ಸಿಬಿಐ ತನಿಖೆ ನಡೆಸಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿಬರುತ್ತಿದೆ.