ನವದೆಹಲಿ : ಮುಂಬೈ ದಾಳಿಯ ರೂವಾರಿ ಝಕೀ ಉರ್ ರೆಹಮಾನ್ ಲಖ್ವಿಯನ್ನು ಪಾಕ್ ಕೋರ್ಟಿನ ಆದೇಶದ ಪ್ರಕಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಂತೆಯೇ ಪಾಕ್ ಸರ್ಕಾರದ ವೈಫಲ್ಯವನ್ನು ಭಾರತ ಬಲವಾಗಿ ಪ್ರತಿಭಟಿಸಿದೆ. ಲಖ್ವಿಯು ಜೈಲಿನಿಂದ ಹೊರಗೆ ಬಾರದಂತೆ ನೋಡಿಕೊಳ್ಳುವುದು ಇಸ್ಲಾಮಾಬಾದ್ ನ ಜವಾಬ್ದಾರಿಯಾಗಿತ್ತು ಎಂದು ಭಾರತ ಹೇಳಿದೆ.
ಪ್ರಭಾರ ವಿದೇಶ ಕಾರ್ಯದರ್ಶಿ ಅನಿಲ್ ವಾಧ್ವಾ, ಪಾಕ್ ಹೈಕಮಿಷನರ್ ಅಬ್ದುಲ್ ಬಾಸಿತ್ ಅವರನ್ನು ಸೌತ್ ಬ್ಲಾಕ್ ಗೆ ಕರೆಸಿಕೊಂಡು, ಮುಂಬಯಿ ದಾಳಿಯ ಸೂತ್ರಧಾರಿ ಉಗ್ರ ಲಖ್ವಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿರುವ ಬಗ್ಗೆ ಭಾರತಕ್ಕಾಗಿರುವ ಅಸಮಾಧಾನವನ್ನು ಕಟುವಾದ ಶಬ್ದಗಳಲ್ಲಿ ತಿಳಿಸಿದರು.
ಭಾರತದ ವಿದೇಶ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ವಿದೇಶ ಪ್ರವಾಸದಲ್ಲಿರುವುದರಿಂದ ವಾಧ್ವಾ ಅವರು ಪಾಕ್ ಹೈಕಮಿಷನರ್ ಅವರನ್ನು ಕರೆಸಿಕೊಳ್ಳಬೇಕಾಯಿತು.
ಮುಂಬಯಿ ಮೇಲಿನ ಉಗ್ರ ದಾಳಿಯ ರೂವಾರಿಯಾಗಿ ಲಖ್ವಿ ವಿರುದ್ಧ ಭಾರತವು ಪಾಕ್ ಸರ್ಕಾರಕ್ಕೆ ಪೂರೈಸಿದ್ದ ಪ್ರಬಲ ಸಾಕ್ಷ್ಯಾಧಾರಗಳನ್ನು ಅದು ನ್ಯಾಯಾಲಯದ ಮುಂದೆ ಸಮರ್ಥವಾಗಿ ಮಂಡಿಸದೇ ಇರುವ ಕಾರಣ ಲಖ್ವಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಜೈಲಿನಿಂದ ಬಿಡುಗಡೆ ಮಾಡಿದೆ. ಲಖ್ವಿ ಜೈಲಿನಿಂದ ಬಿಡುಗಡೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಕ್ ಸರ್ಕಾರದ ಮೇಲಿತ್ತು ಎಂದು ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.