ಹೈದ್ರಾಬಾದ್ : ಟಾಲಿವುಡ್ನ ಖ್ಯಾತ ಹಾಸ್ಯ ನಟ ಎಂ.ಎಸ್ ನಾರಾಯಣ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಎಂ.ಎಸ್ ನಾರಾಯಣ ಅವರು ಕಳೆದ ಒಂದು ವಾರದಿಂದ ಮಧಪುರ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಕ್ರಾಂತಿ ಹಬ್ಬ ಆಚರಿಸಲೆಂದು ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮ ನಿಡಮರ್ರುಗೆ ತೆರಳಿದ್ದರು. ಈ ವೇಳೆ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. 63 ವರ್ಷದ ನಾರಾಯಣ ಅವರು ಹೃದಯ ಸಂಬಂಧಿ ರೋಗ ಹಾಗೂ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
1951 ಏಪ್ರಿಲ್ 16ರಂದು ಜನಿಸಿದ ನಾರಾಯಣ ಅವರ ಮೂಲ ಹೆಸರು ಸೂರ್ಯನಾರಾಯಣ. ಯಮಧರ್ಮರಾಜು ಚಿತ್ರದ ಮೂಲಕ ತೆಲಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು, ಹಾಸ್ಯ ಪಾತ್ರದಲ್ಲಿ ಹೆಚ್ಚು ಖ್ಯಾತಿ ಪಡೆದರು. 700ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಾರಾಯಣ ಅವರು 8 ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಬಹುಭಾಷಾ ನಟರಾಗಿದ್ದ ನಾರಾಯಣ ಅವರಿಗೆ 5 ಬಾರಿ ಪ್ರತಿಷ್ಠಿತ ನಂದಿ ಪ್ರಶಸ್ತಿ ಗೌರವ ಸಿಕ್ಕಿದೆ.