ಶ್ರೀನಗರ : ಭಾರತದ ಗಡಿಯಲ್ಲಿ ಒಳನುಸುಳಲು ಉಗ್ರರು ವಿಪುಲ ಯತ್ನ ನಡೆಸಿದ್ದು, ಗಡಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.
ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಲಷ್ಕರ್ ಎ ತೋಯ್ಬಾ ಉಗ್ರರು ಭಾರತದ ಒಳನುಸುಳಲು ಯತ್ನಿಸುತ್ತಿದ್ದು, ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿವೆ. ಉಗ್ರರ ಯತ್ನವನ್ನು ವಿಫಲಗೊಳಿಸಿರುವ ಭಾರತೀಯ ಸೇನಾ ಪಡೆ ಪ್ರತಿ ದಾಳಿ ನಡೆಸಿವೆ.
ಈ ನಡುವೆ ಇಲ್ಲಿನ ಸೋಪುರ್ ಪ್ರದೇಶದ ಕಟ್ಟಡವೊಂದರಲ್ಲಿ ಇಬ್ಬರು ಲಷ್ಕರ್ ಎ ತೋಯ್ಬಾ ಉಗ್ರರು ಅಡಗಿ ಕುಳಿತಿದ್ದಾರೆ ಎಂದು ತಿಳಿದುಬಂದಿದೆ. ಭದ್ರತಾ ಪಡೆಗಳು ಕಟ್ಟಡವನ್ನು ಸುತ್ತುವರೆದಿದ್ದು, ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.
ಈ ನಡುವೆ ಪಾಕಿಸ್ತಾನ ಪದೇಪದೆ ಕದನ ವಿರಾಮ ಉಲ್ಲಂಘಿಸುತ್ತಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸೇನಾ ಮುಖ್ಯಸ್ಥ ಜನರಲ್ ದಲ್ಬಿರ್ ಸಿಂಗ್ ಸುಹಾಗ್, ಪಾಕಿಸ್ತಾನ ಸ್ವತಃ ಉಗ್ರರ ದಾಳಿಯಿಂದ ನರಳುತ್ತಿದ್ದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಪರೋಕ್ಷ ಯುದ್ಧಕ್ಕೆ ಉಗ್ರರಿಗೆ ಬೆಂಬಲ ನೀಡುತ್ತಿದೆ. ಭಾರತೀಯ ಸೇನೆ 2014ರಲ್ಲಿ 110 ಉಗ್ರರನ್ನು ಮಟ್ಟ ಹಾಕಿದೆ. ಆದರೆ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಚಟುವಟಿಕೆಗಳು ಹೆಚ್ಚುತ್ತಿದ್ದು, ಇದರಿಂದ ಭಾರತ ಅತಿ ಹೆಚ್ಚು ಅಪಾಯ ಮತ್ತು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಗಡಿಯಲ್ಲಿ ಉಗ್ರರ ಒಳನುಸುಳುವ ಯತ್ನವೂ ಹೆಚ್ಚುತ್ತಿದೆ.