ಕಾಶ್ಮೀರ : ಸೈನಿಕರ ವೇಷ ಧರಿಸಿ, ಜಮ್ಮು-ಕಾಶ್ಮೀರದ ಅರ್ನಿಯಾ ವಲಯದಲ್ಲಿನ ಸೇನೆಯ ತಾತ್ಕಾಲಿಕ ಬಂಕರ್ನಲ್ಲಿ ಅಡಗಿ ಕುಳಿತು ಏಳು ಮಂದಿಯನ್ನು ಹತ್ಯೆಗೈದಿದ್ದ ನಾಲ್ವರು ಉಗ್ರರ ಪೈಕಿ ಕೊನೆಯವನನ್ನು ಕೊಲ್ಲುವಲ್ಲಿ ಯೋಧರು ಸಫಲರಾಗಿದ್ದಾರೆ. ಇದರ ನಡುವೆಯೇ ಉಗ್ರರಿಗೆ ಸಹಾಯ ಮಾಡಲೆಂದೋ, ಏನೋ ಇದೇ ಅರ್ನಿಯಾ ಗಡಿಯಲ್ಲಿ ಪಾಕಿಸ್ತಾನವು ಭಾರತದ ಮೇಲೆ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದೆ.
ತಾತ್ಕಾಲಿಕ ಬಂಕರ್ನಲ್ಲಿ ಅಡಗಿ ಕುಳಿತಿದ್ದ ನಾಲ್ವರು ಉಗ್ರರ ಸದೆಬಡಿಯುವ ಕಾರ್ಯಾಚರಣೆ ನ.27ರ ಬೆಳಗ್ಗೆಯಿಂದಲೇ ಆರಂಭವಾಗಿತ್ತು. ಈ ವೇಳೆ ಉಗ್ರರ ಗುಂಡಿನ ದಾಳಿಗೆ ನಾಲ್ವರು ನಾಗರಿಕರು, ಮೂವರು ಯೋಧರು ಸಾವನ್ನಪ್ಪಿದ್ದರು. ಅಂದೇ ಮೂವರು ಉಗ್ರರನ್ನು ಕೊಲ್ಲಲಾಗಿತ್ತು. ಆದರೆ ಏಕೈಕ ಉಗ್ರ ಬಂಕರ್ನಿಂದ ದಾಳಿ ನಡೆಸುತ್ತಿದ್ದ.
ಬಂಕರ್ ಪ್ರದೇಶವನ್ನು ಸುತ್ತುವರಿದ ಯೋಧರು, ನ.28ರಂದು ಬೆಳಗ್ಗೆ ದಾಳಿ ಮುಂದುವರಿಸಿದರು. ಈ ವೇಳೆ, ಮೃತ ನಾಗರಿಕರ ಶವ ಸಂಗ್ರಹಿಸಲು ಹೋದವರ ಮೇಲೂ ಉಗ್ರ ದಾಳಿ ನಡೆಸಿದ. ಬಳಿಕ ಆತನನ್ನು ಕೊಲ್ಲುವುದರೊಂದಿಗೆ ಕಾರ್ಯಾಚರಣೆ ಅಂತ್ಯವಾಯಿತು.
ಈ ನಡುವೆ, ಅರ್ನಿಯಾ ವಲಯಕ್ಕೆ ನುಸುಳಿದ್ದ ಉಗ್ರರ ಸದೆಬಡಿಯುವ ಕಾರ್ಯಾಚರಣೆಯಲ್ಲಿ ಯೋಧರು ವ್ಯಸ್ತರಾಗಿರುವಾಗಲೇ ಗಡಿಯಾಚೆ ಯಿಂದ ಪಾಕಿಸ್ತಾನ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂ ಸಿದೆ. ಕೆಲವು ಬಾರಿ ಪಾಕ್ ಯೋಧರು ಗುಂಡಿನ ದಾಳಿ ನಡೆಸಿದರು. ಭಾರತೀಯ ಯೋಧರು ಯಾವುದೇ ಪ್ರತ್ಯುತ್ತರ ನೀಡಲಿಲ್ಲವಾದರೂ ದಾಳಿ ನಿಂತುಹೋಯಿತು. ಯಾವುದೇ ಅಪಾಯ ಸಂಭವಿಸಿಲ್ಲ.
ಯುವಕರಿಗೆ ಅದರಲ್ಲೂ ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಮಿಲಿಟರಿ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ವಾರ್ಷಿಕ 60 ಸಾವಿರ ಕೋಟಿ ರೂ. ವೆಚ್ಚವಾಗಲಿರುವ ಹಿನ್ನೆಲೆಯಲ್ಲಿ ರಷ್ಯಾ, ಮತ್ತಿತರ ರಾಷ್ಟ್ರಗಳ ರೀತಿ ಸರ್ವರಿಗೂ ಮಿಲಿಟರಿ ತರಬೇತಿ ಕಡ್ಡಾಯಗೊಳಿಸದಿರಲು ನಿರ್ಧರಿಸಿದೆ. ಸೇನಾ ತರಬೇತಿಯನ್ನು ಪ್ರಾಯೋಗಿಕವಾಗಿ ಗಡಿ ಪ್ರದೇಶಗಳಲ್ಲಿ ಆರಂಭಿಸಲಾಗುತ್ತದೆ. 1 ಗಂಟೆಯ ತರಬೇತಿ ಅಥವಾ ಶಾಲೆ ಮತ್ತು ಕಾಲೇಜುಗಳ ಪಠ್ಯದಲ್ಲೇ ಕೋರ್ಸ್ ಆರಂಭಿಸುವ ಉದ್ದೇಶವಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.