ಬೆಂಗಳೂರು : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಪರಪ್ಪನ ಅಗ್ರಹಾರದ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಾನ್ ಮೈಕಲ್ ಕುನ್ಹಾ ತೀರ್ಪು ಪ್ರಕಟಿಸಲಿದ್ದಾರೆ. ನ್ಯಾಯಾಲಯದ 2ಕಿ.ಮೀನಷ್ಟು ದೂರ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಕರ್ನಾಟಕ-ತಮಿಳುನಾಡು ಗಡಿಯಲ್ಲಿಯೂ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಬಾನೊಟ್ ನೇತೃತ್ವದಲ್ಲಿ ಓರ್ವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 8 ಡಿವೈಎಸ್ಪಿ, 28 ಇನ್ಸ್ ಪೆಕ್ಟರ್, 70 ಪಿಎಸ್ ಐ, 116 ಎ ಎಸ್ ಐ, 422 ಮುಖ್ಯಪೇದೆಗಳು, 80 ಮಹಿಳಾ ಪೊಲೀಸ್ ಸಿಬ್ಬಂದಿ, 641 ಪೇದೆಗಳನ್ನು ನಿಯೋಜಿಸಲಾಗಿದೆ.
ಬ್ರೆಂಗಳೂರು ನಗರದ ತಮಿಳು ಭಾಷಿಕರ ಬಾಹುಳ್ಯದ ಪ್ರದೇಶಗಳಿಗೆ ವಿಶೇಷ ಭದ್ರತೆ ನೀಡಲಾಗಿದೆ.
ಪರಪ್ಪನ ಅಗ್ರಹಾರ ಸುತ್ತಮುತ್ತ ಭದ್ರತೆಗೆ ಬೆಂಗಳೂರಿನ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಮೂವರು ಜಂಟಿ ಪೊಲೀಸ್ ಆಯುಕ್ತರು, 8 ಡಿಸಿಪಿ, 30ಎಸಿಪಿ, 90 ಇನ್ಸ್ ಪೆಕ್ಟರ್, 300 ಪಿಎಸ್ ಐ, 100 ಗೃಹ ರಕ್ಷಕ ದಳ ಸಿಬ್ಬಂದಿ, 4 ಕ್ಷಿಪ್ರ ಕಾರ್ಯಪಡೆ, 10 ಕೆ ಎಸ್ ಆರ್ ಪಿ ಮತ್ತು ನಗರ ಸಶಸ್ತ್ರ ಮೀಸಲು ಪಡೆಗಳನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಝಡ್ ಪ್ಲಸ್ ಭದ್ರೆ ಹೊಂಡಿರುವ ಹಿನ್ನಲೆಯಲ್ಲಿ ಭಯೋತ್ಪಾದಕ ನಿಗ್ರಹ ಪಡೆ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನು ಸಹ ನಿಯೋಜಿಸಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರಕರಣದ ತೀರ್ಪು ಕೇಳಲು ಹಾಗೂ ತಮ್ಮ ಮುಖ್ಯಮಂತ್ರಿ ಬೆಂಬಲಿಸಿ ಹಲವಾರು ಸಚಿವರು, ಶಾಸಕರು, ಎಐಎಡಿಎಂಕೆ ಕಾರ್ಯಕರ್ತರು ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಆದರೆ ವಿಶೇಷ್ ಪೊಲೀಸ್ ಪಾಸ್ ಗಳನ್ನು ಪಡೆದವರಿಗೆ ಮಾತ್ರ ಕೋರ್ಟ್ ಆವರಣದಲ್ಲಿ ವಕಾಶ ನೀಡಲಾಗಿದ್ದು, ಉಳಿದವರಿಗೆ ಅವಕಾಶ ನಿರಾಕಲಿಸಲಾಗಿದೆ.
ಹೊಸೂರು ರಸ್ತೆ ಜಂಕ್ಷನ್ ಬಳಿ ಜಯಲಲಿತಾ ಬೆಂಬಲಿಗರು ಹಾಗೂ ತಮಿಳುನಾಡು ವಕೀಲರುಗಳು ನಗರದ ಒಳಗೆ ಪ್ರವೇಶಿಸಲು ಯತ್ನಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅವರನ್ನು ಅಲ್ಲಿಯೇ ತಡೆಹಿಡಿದಿದ್ದಾರೆ. ಜಯಲಲಿತಾ ಪರ ಘೋಷಣೆ ಕೂಗುತ್ತಿರುವ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.
ಅಲ್ಲದೇ ತೀರ್ಪು ಹಿನ್ನಲೆಯಲ್ಲಿ ರಾಜ್ಯದಿಂದ ತಮಿಳುನಾಡಿಗೆ ಸಂಚರಿಸುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ.