ನವದೆಹಲಿ : ಬೇಹುಗಾರಿಕೆ ನಡೆಸಲು ಶ್ರೀಲಂಕಾದ ಮುಸ್ಲಿಂ ಯುವಕರನ್ನು ಪಾಕಿಸ್ತಾನ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. 'ಪಾಕಿಸ್ತಾನ'ದ ಪರವಾಗಿ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಶ್ರೀಲಂಕಾ ಮೂಲದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಬೇಹುಗಾರಿಕೆ ನಡೆಸಿದ ಮೂರನೇ ವ್ಯಕ್ತಿಯನ್ನು ಬಂಧಿಸಲಾಗಿದ್ದು ಈಶಾನ್ಯ ಶ್ರೀಲಂಕಾದಲ್ಲಿರುವ ತಮಿಳು ಮಾತನಾಡುವ ಮುಸ್ಲಿಮರ ಬಗ್ಗೆ ಗುಪ್ತಚರ ಇಲಾಖೆ ಹೆಚ್ಚು ತಲೆಕೆಡಿಸಿಕೊಳ್ಳುವಂತಾಗಿದೆ.
ಕಳೆದ ಏಪ್ರಿಲ್ ನಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳು, ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಶ್ರೀಲಂಕಾದ ಸಾಕಿರ್ ಹುಸೇನ್ ಎಂಬುವವನನ್ನು ಚೆನ್ನೈ ನಲ್ಲಿ ಬಂಧಿಸಲಾಗಿತ್ತು. ಈ ವೇಳೆ ಮಾಲ್ಡೀವ್ಸ್ ಪ್ರಜೆಗಳ ಸಹಾಯ ಪಡೆದು ಚೆನ್ನೈ ನಲ್ಲಿದ್ದ ಇಸ್ರೇಲ್, ಯು.ಎಸ್ ದೂತವಾಸ ಕಚೇರಿ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಸಂಚು ರೂಪಿಸಿತ್ತು ಎಂಬ ಅಘಾತಕಾರಿ ಅಂಶ ಬಂಧಿತನಿಂದ ಬಯಲಾಗಿದೆ. ಇದಾದ ಒಂದು ತಿಂಗಳ ನಂತರ, ಇಂತದ್ದೇ ಆರೋಪದಡಿಯಲ್ಲಿ ಮಹಮದ್ ಸುಲೇಮಾನ್ ಎಂಬ ಮತ್ತೋರ್ವ ಶ್ರೀಲಂಕಾದ ಪ್ರಜೆಯನ್ನು ಮಲೇಷಿಯಾದಲ್ಲಿ ಬಂಧಿಸಲಾಗಿತ್ತು. ಬಂಧಿತರೆಲ್ಲರನ್ನೂ ಕೊಲಂಬೋದ ಪಾಕಿಸ್ತಾನಿ ರಾಯಭಾರಿ ಅಮಿರ್ ಝುಬೇರ್ ಸಿದ್ದಿಕಿ ನೇಮಕ ಮಾಡಿದ್ದ ಎಂದು ಹೇಳಲಾಗಿದೆ.
ಗುಪ್ತಚರ ಮಾಹಿತಿ ಪ್ರಕಾರ, ಪಾಕಿಸ್ತಾನದೊಂದಿಗೆ ಉಗ್ರ ಸಂಘಟನೆ ಲಷ್ಕರ್-ಎ- ತೋಯ್ಬಾ ಸಂಘಟನೆ ಸಹ ಕೈಜೋಡಿಸಿದ್ದು ಭಾರತದಲ್ಲಿ ಬೇಹುಗಾರಿಕೆ ನಡೆಸಲು ಯುವಕರನ್ನು ನೇಮಿಸುತ್ತಿದೆ. 1980ರಲ್ಲಿ ಎಲ್.ಟಿ.ಟಿ.ಇ ಹಾಗೂ ತಮಿಳರ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ಶ್ರೀಲಂಕಾದಲ್ಲಿದ್ದ ತಮಿಳು ಮುಸ್ಲಿಮರು ಮೂಲಭೂತವಾದಿ ಶಕ್ತಿಗಳೆಡೆಗೆ ಆಕರ್ಷಿತರಾಗಿದ್ದರು. ಇದನ್ನೇ ಬಂಡವಾಳವನ್ನಾಗಿರಿಸಿಕೊಂಡಿರುವ ಪಾಕಿಸ್ತಾನ ಅಲ್ಲಿನ ಕೆಲವು ಯುವಕರನ್ನು ಬೇಹುಗಾರಿಕೆಗೆ ಬಳಸಿಕೊಳ್ಳುತ್ತಿದೆ.