ನೀರು ಜೀವಧಾರೆ, ಜೀವಜಲ, ಮಾತ್ರವಲ್ಲ ಅದು ಜೀವದ ಮೂಲ. ಸಕಲ ಜೀವಿಗಳಿಗೂ ನೀರು ಬೇಕೇ ಬೇಕು. ಹೀಗಿರುವಾಗ ಉದ್ಯಾನ ನಗರಿ ಬೆಂಗಳೂರಿನಲ್ಲಿ ನೀರಿನ ಮೂಲಗಳೆ ಇಂದು ಬರಿದಾಗುತ್ತಿವೆ; ಬರಿದಾಗಿವೆ. ಹೌದು.. ಬೆಂದಕಾಳೂರಿನ ಕೆರೆಗಳೆಲ್ಲ ಇಂದು ಬೆಂದು ಹೋಗುತ್ತಿವೆ. ಉದ್ಯಾನ ನಗರಿಯ ಒಂದೊಂದು ಕೆರೆಯನ್ನು ಕಣ್ಬಿಟ್ಟು ನೋಡಿದರೂ ನಮ್ಮ ಜೀವ ಚೈತನ್ಯವೇ ಉಡುಗಿ ಹೋದಂತೆ ಭಾಸವಾಗುತ್ತದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 207 ಕೆರೆಗಳಿವೆ. ಅವುಗಳಲ್ಲಿ ಬಹುತೇಕ ಕೆರೆಗಳ ಸ್ಥಿತಿ ಶೋಚನೀಯವಾಗಿದೆ. ಆನೇಕ ಕೆರೆಗಳನ್ನು ಕಟ್ಟಡಗಳು, ರಿಯಲ್ ಎಸ್ಟೇಟ್ ಡೆವಲಪರ್ಸ್ ಒತ್ತುವರಿ ಮಾಡಿಕೊಂಡಿದ್ದಾರೆ ಹಾಗೂ ಉಳಿದವನ್ನು ಮಾಡಿಕೊಳ್ಳುತ್ತಿದ್ದಾರೆ. ವಾಸ್ತವತೆ ಹೀಗಿದ್ದಾಗ್ಯೂ ಹೆಚ್ಚಿನ ಕೆರೆಗಳಿಗೆ ಚರಂಡಿ, ಕೊಳಚೆ ನೀರು, ಕಟ್ಟಡ-ಕಾರ್ಖಾನೆಗಳ ರಾಸಾಯನಿಕ ವಸ್ತುಗಳು, ಪ್ಲಾಸ್ಟಿಕ್, ಕಸಗಳನ್ನು ನೇರವಾಗಿ ಬಿಡಲಾಗುತ್ತಿದೆ. ಇದರಿಂದ ಕೆರೆಯ ನೀರು ಸಂಪೂರ್ಣ ಮಲಿನವಾಗಿವೆ.
ಅಲಸೂರು, ಮಡಿವಾಳ, ವೃಷಾಭಾವತಿ, ಸಾರಕ್ಕಿ, ಪುಟ್ಟೇನಹಳ್ಳಿ, ಬೆಳಚಿದೂರು, ಬ್ಶೆರಂದೂರು, ಚಘಟ್ಟ ಹೀಗೆ ನೂರಕ್ಕೂ ಹೆಚ್ಚು ಕೆರೆಗಳು ಹಾಳಾಗಿವೆ.
ಇಲ್ಲಿಯ ಕೆರೆಗಳು ಎಷ್ಟರಮಟ್ಟಿಗೆ ಕಲುಷಿತವಾಗಿವೆ ಎಂದರೆ ಮನುಷ್ಯರ ಬಳಕೆಗೆ ಮಾತ್ರವಲ್ಲ ಪ್ರಾಣಿಗಳೂ ಈ ನೀರನ್ನು ಸೇವಿಸಲು ಸಾಧ್ಯವಿಲ್ಲ. ಉದ್ದಿಮೆ, ಕಾರ್ಖಾನೆಗಳಿಂದಾಗಿ ಬಹುತೇಕ ಕೆರೆಗಳಲ್ಲಿ ನೈಟ್ರೋಜನ್, ಫೊಸ್ಪರಸ್ ಮುಂತಾದ ಕೆಮಿಕಲ್ ಗಳು ನೀರಿನಲ್ಲಿ ಮಿಶ್ರಣಗೊಂಡಿವೆ ಎಂಬುದು ಇಡ್ಬ್ಲ್ಯುಆರ್ಸಿ, ಸಿಇಎಸ್, ಐಐಎಸ್ಸಿ ಇವುಗಳ ಸಂಶೋಧನೆಗಳಿಂದ ದೃಢಪಟ್ಟಿವೆ. ನೀರಿನಲ್ಲಿ ಆಮ್ಲಜನಕದ ಆಂಶ ತೀರಾ ಕಡಿಮೆಯಾಗುತ್ತಿವೆ. ಕೊಳಚೆ ನೀರು ಹಾಗೂ ಕೆಮಿಕಲ್ಸ್ನಿಂದ ನೀರಿನ ಮೇಲ್ಭಾಗದಲ್ಲಿ ಒಂದು ರೀತಿಯ ತಿಳಿಯಾದ ಪರೆ ನಿರ್ಮಾಣವಾಗಿದೆ. ಇದರಿಂದಾಗಿ ಸೂರ್ಯನ ಕಿರಣಗಗಳು ನೀರಿನ ಒಳಗೆ ಪ್ರವೇಶಿಸುತ್ತಿಲ್ಲ. ಹೀಗಾಗಿ ಪಾಚಿಗಳು ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕಪ್ಪೆ, ಮೀನು ಇನ್ನಿತರ ಜಲಚರಗಳ ಬೆಳವಣಿಗೆ ಕುಂಠಿತವಾಗುತ್ತಿವೆ. ಆಷ್ಟೆ ಅಲ್ಲ, ನೀರಿನ ಮಟ್ಟವೂ ಕುಸಿಯುತ್ತಿದೆ. ಕೆಲವು ಕೆರೆಗಳು ಕೊಳಚೆಯಿಂದಾಗಿ ಸೊಳ್ಳೆಗಳ ವಾಸಸ್ಥಾನವಾಗಿ ಮಾರ್ಪಾಡಾಗಿವೆ. 207 ಕೆರೆಗಳಲ್ಲಿ 93 ಕೆರೆಗಳು ಮಾತ್ರ ತಕ್ಕಮಟ್ಟಿಗೆ ಚೆನ್ನಾಗಿವೆ ಎಂದು ಹೇಳಬಹುದು.
ಭೂ-ಅಭಿವೃದ್ಧಿ ಪ್ರಾಧಿಕಾರ (ಎಲ್ ಡಿ ಎ) ದ ವರದಿ ಪ್ರಕಾರ ಬೆಂಗಳೂರಿನ ಕೆರೆಗಳ ಸಂಖ್ಯೆ 207. ಅವುಗಳಲ್ಲಿ 135 ಕೆರೆಗಳು ಬಿಬಿಎಂಪಿ, 49 ಕೆರೆಗಳು ಬಿಡಿಎ, 18 ಕೆರೆಗಳು ಸಣ್ಣ ನೀರಾವರಿ ಇಲಾಖೆ, 5 ಕೆರೆಗಳು ಕರ್ನಾಟಕ ಸರಕಾರದ ವಿವಿಧ ಇಲಾಖೆಗಳ ಅಧೀನಗಳಲ್ಲಿ ಬರುತ್ತವೆ. ಈ ಕೆರೆಗಳ ಆಭಿವೃದ್ಧಿಗಾಗಿ 9,498.40 ಕೋಟಿ ರೂ. ಬೇಕು. ಆದರೆ ಸರ್ಕಾರ ಬಡ್ಜೆಟ್ನಲ್ಲಿ ಬಿಡುಗಡೆ ಮಾಡಿದ್ದು ರೂ.221 ಕೋಟಿ ಮಾತ್ರ. ಈ ಹಣ ಬಿಬಿಎಂಪಿ ವ್ಯಾಪ್ತಿಚಿಯಲ್ಲಿ ಬರುವ 135 ಕೆರೆಗಳಲ್ಲಿ 55 ಕೆರೆಗಳಿಗೆ ಮಾತ್ರ ಸಾಲುತ್ತೆ ಎಂಬುದು ಬಿಬಿಎಂಪಿ ಉವಾಚ. ಈ 55 ಕೆರೆಗಳಲ್ಲಿ 17 ಕೆರೆಗಳ ಆಭಿವೃದ್ಧಿ ಈಗಾಗಲೇ ಪೂರ್ತಿಯಾಗಿವೆ. 8 ಕೆರೆಗಳು ಅಭಿವೃದ್ಧಿ ಹಂತದಲ್ಲಿದೆ. ಹಾಗಾದರೆ ಉಳಿದ 80 ಕೆರೆಗಳ ಅಭಿವೃದ್ಧಿ ಬಗ್ಗೆ ಇವರ ಬಳಿ ಉತ್ತರವಿಲ್ಲ.
2011ರ ಬಿಬಿಎಂಪಿ ವರದಿ ಪ್ರಕಾರ ಬೆಂಗಳೂರಿನ 134 ಕೆರೆಗಳು ಮಲಿನವಾಗಿತ್ತು. ಆದರೆ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿಯಲ್ಲಿ ಇಂದು ಆದೆಷ್ಟು ಕೆರೆಗಳು ಮಲಿನವಾಗಿದೆಯೊ ಊಹಿಸಲು ಸಾಧ್ಯವಿಲ್ಲ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉದ್ಯಾನ ನಗರಿಯ ಜನತೆ ಹನಿ ನೀರಿಗಾಗಿ ಪರಿತಪಿಸಬೇಕಾದ ಕಾಲ ದೂರವಿಲ್ಲ.
Author : ಚಂದ್ರಲೇಖಾ ರಾಕೇಶ್ ಭಟ್